ರಾಯಚೂರು: ಸಮಗ್ರ ಕೃಷಿ ಹಾಗೂ ಕೃಷಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸುವ ಮೂಲಕ ರೈತರ ಆದಾಯ ದ್ವಿಗುಣ ಆಗಲಿದೆ ಎಂದು ರಾಯಚೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮೂಜಬೂರ ರೆಹಮಾನ ತಿಳಿಸಿದರು.
ತಾಲ್ಲೂಕಿನ ಗಿಲ್ಲೇಸುಗೂರು ಹೋಬಳಿಯ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಪಶುಸಂಗೋಪನೆ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಕೃಷಿ ಕಲ್ಯಾಣ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಅನುಪಮ ಸಿ. ಮಾತನಾಡಿ, ರೈತ ಬಾಂಧವರು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿ ಸಂಬಂಧಿಸಿದ ಇಲಾಖೆಗಳನ್ನು ಭೇಟಿಯಾಗಿ ಇಲಾಖೆಗಳಲ್ಲಿ ಸಹಾಯ, ಸೌಲಭ್ಯಗಳನ್ನು ಪಡೆದು ಜೀವನಮಟ್ಟವನ್ನು ಸುಧಾರಿಸಿ
ಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯ ಕೀಟ ತಜ್ಞ ಡಾ. ಶ್ರೀವಾಣಿ ಮಾತನಾಡಿ, ವಿವಿಧ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಹಾಗೂ ಬಿ.ಟಿ. ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆಗೆ ಮುಜಾಗ್ರತಾ ಕ್ರಮಗಳನ್ನು ತಿಳಿಸಿದರು.
ತೋಟಗಾರಿಕೆ ಇಲಾಖೆಯ ವಿಷಯ ತಜ್ಞರಾದ ಅಮರೇಶ ಮಾತನಾಡಿ, ತೋಟಗಾರಿಕೆಯಲ್ಲಿ ಹನಿ ನೀರಾವರಿ ಮಹತ್ವ ಮತ್ತು ನೀರಿನ ಸದ್ಬಳಕೆ ಕುರಿತು ಮಾಹಿತಿ ನೀಡಿದರು. ದೈನಂದಿನ ಆಹಾರದಲ್ಲಿ ಸಮತೋಲನ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ರೈತ ಮಹಿಳೆಯರು ಕೈತೋಟ ಮತ್ತು ಮನೆ ಅಂಗಳದಲ್ಲಿ ತರಕಾರಿ ಬೆಳೆದುಕೊಳ್ಳಬೇಕು ಎಂದು ತಿಳಿಸಿದರು.
ತೋಟಗಾರಿಕೆ ಅಧಿಕಾರಿ ಪಾಂಡುರಂಗ ಮಾತನಾಡಿ, 100 ಜನ ಫಲಾನುಭವಿ ರೈತರಿಗೆ ತೆಂಗಿನ ಸಸಿಗಳನ್ನು ವಿತರಿಸಿದರು. ಕೃಷಿ ಕಲ್ಯಾಣ ಅಭಿಯಾನ ಕ್ರಮದಡಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಸಸಿಗಳನ್ನು ವಿತರಿಸಿದರೆ ಪಶುಸಗೋಪನೆ ಅಧಿಕಾರಿಗಳು ರಾಸುಗಳಿಗೆ ಪೌಷ್ಟಿಕಾಂಶದ ಪೊಟ್ಟಣಗಳನ್ನು ಇಲಾಖೆಯಿಂದ ಉಚಿತವಾಗಿ ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಕೆ.ಡಿ.ಪಿ ಸದ್ಯಸ್ಯ ಮುನಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕರಿಬಸವ, ಉರುಕುಂದ ನಾಯಕ, ಚಂದ್ರಪ್ಪ ಈರಪ್ಪ ಇದ್ದರು.
ರೈತರು ಕೃಷಿ ಜೊತೆಗೆ ಪೂರಕ ಚಟುವಟಿಕೆ ಮತ್ತು ಆದಾಯ ತರುವ ಉದ್ಯೋಗಗಳನ್ನು ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ
– ಡಾ.ಅನುಪಮ ಸಿ, ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ