ಇಂಧನ ಮಿತವ್ಯಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಗೇಲ್ ಇಂಡಿಯಾ ಲಿಮಿಟೆಡ್ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸಕ್ಷಮ್ 2019’ (ಸಂರಕ್ಷಣ ಕ್ಷಮತಾ ಮಹೋತ್ಸವ್) ಸೈಕ್ಲೋಥಾನ್ನಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು.
ಕಂಠೀರವ ಕ್ರೀಡಾಂಗಣದ ಬಳಿ ಸೈಕ್ಲೋಥಾನ್ಗೆ ಚಾಲನೆ ದೊರೆಯಿತು. ಅಲ್ಲಿಂದ ಸೈಕಲ್ ಸವಾರರು ಕಬ್ಬನ್ ಉದ್ಯಾನ ಸುತ್ತ ಐದು ಕಿ.ಮೀಗೂ ಹೆಚ್ಚಿನ ದೂರ ಕ್ರಮಿಸಿ ಪುನಃ ಕಂಠೀರವ ಕ್ರೀಡಾಂಗಣದಲ್ಲಿ ಸವಾರಿ ಮುಕ್ತಾಯಗೊಳಿಸಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಆಶ್ರಯದಡಿ, ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ (ಪಿಸಿಆರ್ಎ), ಗೇಲ್ ಇಂಡಿಯಾ ಲಿಮಿಟೆಡ್ ಇದನ್ನು ಆಯೋಜಿಸಿತ್ತು.
ಮುಖ್ಯ ಕಾರ್ಯದರ್ಶಿ ಟಿ.ಎಂ. ಭಾಸ್ಕರ್ ಮತ್ತು ಪಿಸಿಆರ್ಎ ಕಾರ್ಯನಿರ್ವಾಹಕ ನಿರ್ದೇಶಕ ಅಲೋಕ್ ತ್ರಿಪಾಠಿ ಮತ್ತು ಗೇಲ್ ಇಂಡಿಯಾ ಲಿಮಿಟೆಡ್ನ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಮುರುಗೇಶನ್ ಅವರು ಸೈಕ್ಲೋಥಾನ್ಗೆ ಚಾಲನೆ ನೀಡಿದರು. ಇಂಧನ ಉಳಿಸುವುದರ ಜತೆಗೆ ಶುದ್ಧ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಲು ನೆರವಾಗಲು ಸೈಕಲ್ ಸವಾರಿಯನ್ನು ಪ್ರೋತ್ಸಾಹಿಸುವುದು ಸೈಕ್ಲೋಥಾನ್ನ ಉದ್ದೇಶ.
ಲಕ್ಕಿಡ್ರಾ ಮೂಲಕ ಸೈಕ್ಲೋಥಾನ್ನಲ್ಲಿ ಭಾಗವಹಿಸಿದ್ದ 10 ಅದೃಷ್ಟಶಾಲಿಗಳಿಗೆ ಹೊಸ ಸೈಕಲ್ಗಳನ್ನು ನೀಡಲಾಯಿತು.
ನಡಿಗೆ, ಸೈಕಲ್ ಸವಾರಿ, ಸಾರ್ವಜನಿಕ ಸಾರಿಗೆ ಬಳಕೆ, ಕಾರ್ ಪೋಲಿಂಗ್ ಮುಂತಾದವುಗಳ ಬಳಕೆಯು ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುತ್ತವೆ. ಇಂಧನ ಉಳಿಕೆ ಮತ್ತು ಪರಿಸರ ಸಂರಕ್ಷಣೆಗೆ ನೆರವಾಗುತ್ತವೆ. ಅಲ್ಲದೇ ಇಂತಹ ಕ್ರಮಗಳಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಜತೆಗೆ ವೈಯಕ್ತಿಕವಾಗಿ ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ದೊರೆಯುತ್ತದೆ ಎನ್ನುತ್ತಾರೆ ಗೇಲ್ ಇಂಡಿಯಾ ಲಿಮಿಟೆಡ್ನ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಪಿ. ಮುರುಗೇಶನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.