ಕುಷ್ಟಗಿ: ಒಂದು ಕಾಲದಲ್ಲಿ ನಿರ್ಜನವಾಗಿದ್ದಮೆಣಸಗೇರಿ ಬಳಿಯ ಗುಡ್ಡ ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಅರಣ್ಯಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮನಸ್ಸು ಮಾಡಿದರೆ ಸಾಧನೆಗೈಯಲು ಸಾಧ್ಯ ಎಂಬುದು ಇಲ್ಲಿ ಕೈಗೊಂಡಿರುವ ಅರಣ್ಯೀಕರಣ ಉತ್ತಮ ಉದಾಹರಣೆ. ಈ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಿ ಬೆಳೆಸಿದರೆ ಒಂದು ಸುಂದರ ಕೃತಕ ಕಾಡನ್ನಾಗಿ ಕಾಣಲು ಸಾಧ್ಯ ಎಂಬ ಕನಸು ಕಂಡ ಇಲಾಖೆ ಸಿಬ್ಬಂದಿ 2019ರಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ.
ಮೆಣಸಗೇರಿ ಸುತ್ತಲಿನ ಗ್ರಾಮಸ್ಥರ ಸಹಕಾರ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶ್ರಮದ ಫಲವಾಗಿ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಒಂದಷ್ಟು ವರ್ಷಗಳು ಕಳೆದರೆ ಇಲ್ಲಿ ಪ್ರಾಕೃತಿಕ ಸೌಂದರ್ಯ ಹೆಚ್ಚುತ್ತದೆ ಎಂಬ ಆಶಯ ಅರಣ್ಯ ಇಲಾಖೆಯದ್ದು.
ಏನಿದೆ ಇಲ್ಲಿ: ಸುಮಾರು 50 ಎಕರೆ ಪ್ರದೇಶದಲ್ಲಿ ಅರಳಿ, ಬಸರಿ, ನೇರಳೆ, ಹೊಂಗೆ, ಕಮರ, ಬೇವು, ತಪಸಿ, ಸೀತಾಫಲ, ಆಲ, ಹೊಳೆಮತ್ತಿ, ಹೀಗೆ ಸುಮಾರು 8 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದ್ದು, ಸುಮಾರು ಆರೇಳು ಅಡಿ ಎತ್ತರದಲ್ಲಿ ಗಿಡಗಳು ಬೆಳೆದು ನಿಂತಿವೆ.
ನರೇಗಾ ಯೋಜನೆಯಲ್ಲಿ ಮಣ್ಣು ಸಂರಕ್ಷಣೆ ಕೆಲಸ ಕೈಗೊಂಡು ಅಲ್ಲಿ ಹೊಂಗೆ, ಗೇರು ಬೀಜಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಅಷ್ಟೇ ಅಲ್ಲದೆ ಈಚಲು ಸಸಿಗಳನ್ನು ಸುತ್ತಲೂ ಬೆಳೆಸುವ ಆಲೋಚನೆಯೂ ಇದೆ.
ಗುಡ್ಡದ ಸುತ್ತಲೂ ಜಾನುವಾರುಗಳು ಬಾರದಂತೆ ಕಂದಕ ನಿರ್ಮಿಸಲಾಗಿದ್ದು ಕಲ್ಲುಕಂಬಳ ಮೂಲಕ ತಂತಿ ಬೇಲಿ ಹಾಕಲಾಗಿದೆ. ಹಾಗಾಗಿ ಸದ್ಯ ಇಲ್ಲಿ ಯಾವುದೇ ಗಿಡಗಳಿಗೆ ಹಾನಿಯಾಗುವ ಆತಂಕ ಇಲ್ಲ ಎನ್ನುತ್ತಾರೆ ಉಪ ವಲಯ ಅರಣ್ಯ ಅಧಿಕಾರಿ ಶಿವಶಂಕರ ರೇವಣಕಿ ಹಾಗೂ ಅರಣ್ಯ ರಕ್ಷಕ ಮಲ್ಲಿಕಾರ್ಜುನ.