ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ನಾಮ; ನಾದ ಪ್ರೇಮ

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅದು 1937.
ಆ ಹುಡುಗನಿಗಿನ್ನೂ ಹದಿನಾಲ್ಕು ವರ್ಷ. ತಂದೆ ಪೊಲೀಸ್‌ ಅಧಿಕಾರಿ. ಇವನೋ ದೇಶಪ್ರೇಮದ ಕಿಚ್ಚು ಒಡಲೊಳಗೆ ತುಂಬಿಕೊಂಡು ಸ್ಫೋಟಿಸಲು ಕಾಯುತ್ತಿರುವ ಹರೆಯದ ಪೋರ. ಅವಕಾಶ ಸಿಕ್ಕಾಗೆಲ್ಲ ಸ್ವಾತಂತ್ರ್ಯ ಹೋರಾಟದ ಭಾಗವಾಗುತ್ತಿದ್ದ.

ಒಮ್ಮೆ ಬೆಂಗಳೂರಿನ ಸಿಟಿ ಮಾರ್ಕೆಟ್‌ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರು. ಆ ಗುಂಪಿನಲ್ಲಿ ಆ ಹದಿನಾಲ್ಕರ ಹುಡುಗನೂ ಇದ್ದ. ಘೋಷಣೆ ಮುಗಿಲುಮುಟ್ಟಿತ್ತು. ಆಕ್ರೋಶ ಕಟ್ಟೆಯೊಡೆದಿತ್ತು. ಆವೇಶದಲ್ಲಿ ಮೈಮರೆತಿರುವಾಗಲೇ ಪೊಲೀಸ್‌ ಪಾಳಯದಿಂದ ಸಿಡಿದ ಗುಂಡೊಂದು ಈ ಹುಡುಗನ ಪಕ್ಕದಲ್ಲಿದ್ದ ಸ್ನೇಹಿತನ ಎದೆಯನ್ನು ಹೊಕ್ಕಿತ್ತು. ನೋಡನೋಡುತ್ತಿದ್ದ ಹಾಗೆಯೇ ಗೆಳೆಯ ಮೈಮುರಿದುಕೊಂಡು ನೆಲಕ್ಕೆ ಬಿದ್ದಿದ್ದ. ನೆತ್ತರು ಮಣ್ಣನ್ನು ಹಸಿಗೊಳಿಸತೊಡಗಿತ್ತು. ಕೊನೆಯುಸಿರೆಳೆಯುವ ಕ್ಷಣ ಮೊದಲು ಸ್ನೇಹಿತ ಉಸುರಿದ್ದ ಉದ್ಗಾರ ಆ ಗದ್ದಲದಲ್ಲಿಯೂ ಇವನ ಮನಸ್ಸೊಳಗೆ ನಾಟಿತ್ತು. ಅದು ‘ಹರೇ ರಾಮ್‌!’.

‘ಹರೇ ರಾಮ್‌’ ಇದೊಂದು ಶಬ್ದದ ಮಂತ್ರವಾಗಿ ಆ ಹುಡುಗನ ಮನಸ್ಸಿನೊಳಗೆ ನಾಟಿಬಿಟ್ಟಿತು. ಆ ಅಸಹಾಯಕ ಕ್ಷಣದಿಂದಲೇ ಅವನೊಳಗಿನ ವಿರಾಗದ ಭಿತ್ತಿಯಲ್ಲಿ ಭಕ್ತಿಯ ಸುಧೆ ಸೆಲೆಯೊಡೆದಿತ್ತು. ಬಾಲ್ಯದಿಂದಲೂ ಮಾರು ಹೋಗುತ್ತಲೇ ಇದ್ದ ಸಂಗೀತ ಆ ಭಕ್ತಿಯ ಅಭಿವ್ಯಕ್ತಿಯಾಗಿ ಕಂಡಿತ್ತು. ಸಂಗೀತವೊಂದೇ ಜನರನ್ನು ಪ್ರೇಮದೆಡೆಗೆ, ಸೌಹಾರ್ದದೆಡೆಗೆ ಪರೋಕ್ಷವಾಗಿ ದೇವರೆಡೆಗೆ ಕರೆದೊಯ್ಯುವ ದಾರಿ ಅನಿಸಿತ್ತು.

ಮತ್ತೆರಡು ವರ್ಷಗಳ ನಂತರ, ಅಂದರೆ 1939ರ ರಾಮನವಮಿ ಸಂದರ್ಭದಲ್ಲಿ ಚಾಮರಾಜಪೇಟೆಯ ಮೂರನೇ ಮುಖ್ಯರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಒಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸೇರಿದ ಜನರ ಸಂಖ್ಯೆ ದೊಡ್ಡದೇ ಇತ್ತು. ಈ ಕಾರ್ಯಕ್ರಮ ಆಯೋಜಿಸಿದವನು ಅದೇ ಹುಡುಗ. ಆ ಹುಡುಗನ ಹೆಸರು ಎಸ್‌. ವಿ. ನಾರಾಯಣಸ್ವಾಮಿ ರಾವ್‌.

ಈಗ ಪ್ರತಿವರ್ಷ ಮಾರ್ಚ್‌–ಏಪ್ರಿಲ್‌ ಸಮಯ ದಲ್ಲಿ ಕೋಟೆ ಹೈಸ್ಕೂಲಿನ ಆವರಣದಲ್ಲಿ ನಡೆಯಲಿರುವ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದ ಮೂಲ ಬೇರು ಹೀಗಿದೆ. ಎಸ್‌.ವಿ.ಎನ್‌ ರಾವ್‌ ಪ್ರಾರಂಭಿಸಿದ ಸಂಗೀತೋತ್ಸವ ಇಂದು ದೇಶದಲ್ಲಿಯೇ ಅತಿದೊಡ್ಡ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವಗಳಲ್ಲಿ ಒಂದಾಗಿದೆ. ಇದನ್ನು ಆಯೋಜಿಸುವ ರಾಮಸೇವಾ ಮಂಡಳಿ, ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಜಾಗೃತಸಂಸ್ಥೆಗಳಲ್ಲಿ ಒಂದಾಗಿದೆ. ಈ ಬೆಳವಣಿಗೆ ಒಮ್ಮಿಂದೊಮ್ಮೆಲೇ ಉಂಟಾಗಿದ್ದಲ್ಲ. ಈ ಯಶಸ್ಸಿನ ಹಿಂದೆ ಎಂಟು ದಶಕದ ಶ್ರಮದ ನಡಿಗೆಯಿದೆ. ಹಲವಾರು ಜನರ ಸಂಗೀತದ ತುಡಿತವಿದೆ.

ಹೆಜ್ಜೆ ಗುರುತುಗಳು
ರಾಮನವಮಿ ಸಂಗೀತೋತ್ಸವ ನಡೆದ ಸ್ಥಳಗಳನ್ನು ಗಮನಿಸಿದರೇ ಅದರ ಬೆಳವಣಿಗೆಯ ಹೆಜ್ಜೆಗಳು ಸ್ಪಷ್ಟವಾಗುತ್ತವೆ. ಚಾಮರಾಜಪೇಟೆಯ 3ನೇ ಮುಖ್ಯರಸ್ತೆಯಲ್ಲಿ ಸಣ್ಣಪ್ರಮಾಣದಲ್ಲಿ ಆರಂಭವಾದ ಸಂಗೀತೋತ್ಸವ ನಂತರದ ವರ್ಷಗಳಲ್ಲಿ ಅಲ್ಲಿಯೇ ಸಮೀಪದ ಶ್ರೀ ರಾಮೇಶ್ವರ ದೇವಸ್ಥಾನದ ಆವರಣಕ್ಕೆ ಸ್ಥಳಾಂತರಗೊಂಡಿತ್ತು. ವರ್ಷದಿಂದ ವರ್ಷಕ್ಕೆ ಈ ಸಂಗೀತೋತ್ಸವದ ಜನಪ್ರಿಯತೆ ಬೆಳೆಯುತ್ತಲೇ ಇತ್ತು. ಆದ್ದರಿಂದಲೇ ಇದರ ಅವಧಿ ಮತ್ತು ಪ್ರಮಾಣ ಎರಡನ್ನೂ ಹಿಗ್ಗಿಸುವುದು ಅನಿವಾರ್ಯವಾಯಿತು. ಹದಿನೈದು ದಿನಗಳ ಪೂರ್ಣ ಪ್ರಮಾಣದ ಸಂಗೀತೋತ್ಸವಗಳನ್ನು ಆಚರಿಸಲು ಆರಂಭಿಸಲಾಯಿತು. 1944ರಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ರಾಮಸೇವಾ ಮಂಡಳಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಅದರಲ್ಲಿ ಸಲೀಂ ದೀಕ್ಷಿತ್‌ ಭಾಗವಹಿಸಿದ್ದರು. ಚಂಬೈ ವೈದ್ಯನಾಥ ಭಾಗವತರ್‌ ಅವರ ಗಾಯ‌ನದ ಮೂಲಕ ಸಂಗೀತೋತ್ಸವ ಪ್ರಾರಂಭವಾಗುವುದು ಒಂದು ಸಂಪ್ರದಾಯ ಎಂಬಂತೆ ಎಷ್ಟೋ ವರ್ಷಗಳ ಕಾಲ ನಡೆಯುತ್ತಿತ್ತು.

ಜನಸಂದಣಿ ಹೆಚ್ಚಿರುವ ಕಾರಣಕ್ಕೆ ರಾಮೇಶ್ವರ ದೇವಸ್ಥಾನದ ಆವರಣವೂ ಕಿರಿದಾಗತೊಡಗಿತ್ತು. 1949ರಿಂದ ಚಾಮರಾಜಪೇಟೆಯ ಎಚ್‌ಡಿಎಫ್‌ಸಿ ಬ್ಯಾಂಕಿನ ಸಭಾಂಗಣಕ್ಕೆ ಸಂಗೀತೋತ್ಸವವನ್ನು ಸ್ಥಳಾಂತರಿಸಲಾಯಿತು. ಮಹಾರಾಜ್‌ಪುರಂ ವಿಶ್ವನಾಥ ಅಯ್ಯರ್‌, ಮಾಧುನಿ ಮಣಿ ಅಯ್ಯರ್‌ರಂಥ ಶ್ರೇಷ್ಠ ಸಂಗೀತಗಾರರ ಕಛೇರಿಗಳಿಗೆ ಈ ವೇದಿಕೆ ಸಾಕ್ಷಿಯಾಯಿತು. ಎಂ.ಎಲ್‌. ವಸಂತಕುಮಾರಿ ಅವರೂ ಇದೇ ವೇದಿಕೆಯಲ್ಲಿ ಹಲವು ಕಛೇರಿಗಳನ್ನು ಪ್ರಸ್ತುತಪಡಿಸಿದ್ದರು.

ರಾಮನವಮಿ ಸಂಗೀತೋತ್ಸವದ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆಯೇ ಅದನ್ನು ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಸಲು ಆರಂಭಿಸಲಾಯಿತು. ಸುಮಾರು ನಾಲ್ಕು ಸಾವಿರ ಜನರು ಸೇರಬಹುದಾಗಿದ್ದ ಈ ಸ್ಥಳದಲ್ಲಿ ಪ್ರತಿವರ್ಷದ ಸಂಗೀತೋತ್ಸವ ಜನರಿಂದ ಕಿಕ್ಕಿರಿದಿರುತ್ತಿತ್ತು. 1952ರಿಂದ ಮುಂದಿನ ಹದಿನಾರು ವರ್ಷಗಳ ಕಾಲ ಇದೇ ಜಾಗದಲ್ಲಿ ಸಂಗೀತೋತ್ಸವ ನಡೆಯುತ್ತಿತ್ತು. ಐವತ್ತು, ಅರವತ್ತರ ದಶಕ ರಾಮಸೇವಾ ಮಂಡಳಿ ಸಂಗೀತೋತ್ಸವದ ಸುವರ್ಣಯುಗ ಎಂದರೂ ತಪ್ಪಾಗಲಾರದು. ಈ ಹೊಸ ವೇದಿಕೆಯಲ್ಲಿ ಮೊದಲು ಸಂಗೀತ ಕಛೇರಿ ನೀಡಿದ್ದು ಎಂ.ಎಸ್‌. ಸುಬ್ಬುಲಕ್ಷ್ಮಿ. ಮುಂದಿನ ನಲ್ವತ್ತೊಂದು ವರ್ಷಗಳಲ್ಲಿ ಮಂಡಳಿಯ ಸಂಗೀತೋತ್ಸವದಲ್ಲಿ ಸುಬ್ಬುಲಕ್ಷ್ಮಿ ಮೂವತ್ತೊಂದು ಸಲ ಸಂಗೀತ ಕಛೇರಿ ನೀಡಿದ್ದಾರೆ. ಅವರು ಇಷ್ಟು ಸಲ ಇನ್ಯಾವ ವೇದಿಕೆಯಲ್ಲಿಯೂ ಕಾರ್ಯಕ್ರಮ ನೀಡಿಲ್ಲ ಎನ್ನುವುದು ಅವರು ಮಂಡಳಿಯ ಜತೆಗೆ ಬೆಳೆಸಿಕೊಂಡಿದ್ದ ಬಾಂಧವ್ಯಕ್ಕೂ ನಿದರ್ಶನ.

‘ಅದು 1980. ಆಗ ಪೆಂಡಾಲ್‌ ಎಲ್ಲ ಏನಿರಲಿಲ್ಲ. ತೆಂಗಿನ ಚಪ್ಪರ. ಏಳುಗಂಟೆಗೆ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಸಂಗೀತ ಕಾರ್ಯಕ್ರಮ. ನಾಲ್ಕು ಗಂಟೆಗೆ ಜೋರು ಮಳೆ ಸುರಿಯಿತು. ಆದರೂ ಏಳುಗಂಟೆಯಷ್ಟರಲ್ಲಿ ಸಾವಿರಕ್ಕೂ ಅಧಿಕ ಜನರು ಚಪ್ಪರದ ಎದುರು ಕಿಕ್ಕಿರಿದು ನಿಂತಿದ್ದರು. ಸುಬ್ಬುಲಕ್ಷ್ಮಿ ಅವರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಸಂಗೀತ ಕಛೇರಿ ನಡೆಸಿಕೊಟ್ಟರು. ಇಂಥ ಅನೇಕ ಧನ್ಯತೆಯ ಕ್ಷಣಗಳಿಗೆ ಮಂಡಳಿ ಸಾಕ್ಷಿಯಾಗಿದೆ’ ಎಂದು  ನೆನಪಿಸಿಕೊಳ್ಳುತ್ತಾರೆ ಎಸ್‌.ವಿ.ಎನ್‌. ರಾವ್‌ ಅವರ ಮಗ ಎಸ್‌. ಎನ್‌. ವರದರಾಜ್‌. 2000ರಲ್ಲಿ ಎಸ್‌.ವಿ.ಎನ್‌. ರಾವ್‌ ನಿಧನರಾದ ಮೇಲೆ ವರದರಾಜ್‌ ಅವರೇ ಪ್ರಧಾನ ಕಾರ್ಯದರ್ಶಿಯಾಗಿ ಮಂಡಳಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

‘ಪ್ರತಿ ವರ್ಷ ಗಣೇಶ ಚತುರ್ಥಿಯ ದಿನದಂದು ‘ರಾಮಸೇವಾಮಂಡಳಿಯ ಕಛೇರಿಯ ಆವರಣದಲ್ಲಿ ಸಣ್ಣ ಪ್ರಮಾಣದಲ್ಲಿ ಸಂಗೀತ ಕಛೇರಿ ಆಚರಿಸುತ್ತೇವೆ. ಇದು ಮತ್ತೆ ಸ್ವಲ್ಪ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ರಾಮ ನವಮಿ ಸಂಗೀತೋತ್ಸವದ ಪೂರ್ವತಯಾರಿಯ ಮೊದಲ ಹೆಜ್ಜೆಯಾಗಿಯೂ ನೋಡಬಹುದು’ ಎಂದು ವರದರಾಜು ವಿವರಿಸುತ್ತಾರೆ.

ಸಂಸ್ಥೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಐವತ್ತನಾಲ್ಕು ದಿನಗಳ ಸಂಗೀತೋತ್ಸವ ಆಯೋಜಿಸಲಾಗಿತ್ತು. ಡೈಮಂಡ್‌ ಜ್ಯುಬಿಲಿ ಅರವತ್ತು ದಿನಗಳ ಕಾಲ ಆಯೋಜಿಸಿತ್ತು. ಹಲವು ವರ್ಷಗಳ ಕಾಲ ನಲ್ವತ್ತು ದಿನಗಳ ಕಾಲ ರಾಮನವಮಿ ಸಂಗೀತೋತ್ಸವ ನಡೆಸಲಾಗಿತ್ತು. ಆದರೆ ಕೆಲವು ವರ್ಷಗಳಿಂದ ಆರ್ಥಿಕ ಸಂಪನ್ಮೂಲ ಹೊಂದಿಸುವುದು ಕಷ್ಟವಾಗಿದ್ದರಿಂದ ಮೂವತ್ತೊಂದು ದಿನಗಳಿಗೆ ಇಳಿಸಲಾಗಿದೆ. ಈ ಮೂವತ್ತೊಂದು ದಿನಗಳಲ್ಲಿ ಸುಮಾರು ಒಂದೂವರೆ ಲಕ್ಷ ಜನ ರಾಮನವಮಿ ಸಂಗೀತೋತ್ಸವದಲ್ಲಿ ಭಾಗವಹಿಸುತ್ತಾರೆ. ಇನ್ನೂರೈವತ್ತರಿಂದ ಮುನ್ನೂರು ಕಲಾವಿದರು ಈ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ.

ಹಳೆ ದಾರಿಯ ಹೊಸ ಹೊರಳುಗಳು
ಶ್ರೀರಾಮಸೇವಾ ಮಂಡಳಿ ಸ್ಥಾಪನೆಗೊಂಡಿರುವುದೇ ಭಾರತೀಯ ಶಾಸ್ತ್ರೀಯ ಸಂಗೀತದ ಜೇಷ್ಠತೆಯನ್ನು ಎತ್ತಿಹಿಡಿ ಯುತ್ತಾ, ತನ್ಮೂಲಕ ಜನರಲ್ಲಿ ಸಂಗೀತಾಭಿರುಚಿ ಬೆಳೆಸುವ ಉದ್ದೇಶದಿಂದ. ಇದೇ ಗುರಿಯನ್ನು ಮುಖ್ಯವಾಗಿರಿಸಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ದಾರಿಗಳಿಗೆ ತನ್ನನ್ನು ತೆರೆದುಕೊಳ್ಳಲೂ ಸಂಸ್ಥೆ ಸಿದ್ಧಗೊಂಡಿದೆ.

ದೇಶದ ಪ್ರಮುಖ ಪಟ್ಟಣಗಳಲ್ಲಿ ಒಂದೊಂದು ತಿಂಗಳಿನ ಒಂದು ದಿನ ಶಾಸ್ತ್ರೀಯ ಸಂಗೀತ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಯೋಚನೆ ಸಂಸ್ಥೆಗಿದೆ. ಹಾಗೆಯೇ ನಮ್ಮ ನೆಲದಲ್ಲಿ ಶಾಸ್ತ್ರೀಯ ಸಂಗೀತದ ಗಂಧವನ್ನು ಉದ್ದೀಪಿಸುವ ಉದ್ದೇಶದಿಂದ ಗುರುಕುಲ ಮಾದರಿಯ ಸಂಗೀತ ಶಾಲೆ ರೂಪಿಸುವ ಯೋಚನೆ ತಂಡ ಕ್ಕಿದೆ. ಹಾಗೆಯೇ ರಾಮಾಯಣದ ಕಥನವನ್ನು ಕಟ್ಟಿಕೊಡುವಂಥ ‘ರಾಮ ಗ್ರಾಮ’ ಎಂಬ ಹೆಸರಿನ ಉದ್ಯಾನ ನಿರ್ಮಾಣ ಮಾಡುವ ಯೋಚನೆಯೂ ಇದೆ.  ಈ ಸಲದ ಉತ್ಸವ ಮಾರ್ಚ್ 25ರಿಂದ ಶುರುವಾಗಲಿದೆ.

-ಉತ್ಸವದಲ್ಲಿ ರಾಜಾಜಿ ಹಾಗೂ ಚಾಮರಾಜೇಂದ್ರ ಒಡೆಯರ್

ಜ್ಞಾನ ಗಾನ ಸಭಾ
‘60ರ ದಶಕದ ಬಹುತೇಕ ರಾಮನವಮಿ ಸಂಗೀತೋತ್ಸವವನ್ನು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌ ಮತ್ತು ಸಿ. ರಾಜಗೋಪಾಲಾಚಾರಿ ಅವರೇ ಉದ್ಘಾಟಿಸುತ್ತಿದ್ದರು. ರಾಜಗೋಪಾಲಾಚಾರಿ ಅವರು ಒಮ್ಮೆ ಭಾಷಣದಲ್ಲಿ ‘ಈ ಸಂಗೀತೋತ್ಸವ ಯಾವತ್ತೂ ಸ್ವಂತ ಕಟ್ಟಡದಲ್ಲಿ ನಡೆಯಬಾರದು. ಸಾರ್ವಜನಿಕ ಸ್ಥಳದಲ್ಲಿಯೇ ನಡೆಯಬೇಕು. ಯಾಕೆಂದರೆ ಈ ಸಂಗೀತೋತ್ಸವವೇ ಒಂದು ಬಗೆಯಲ್ಲಿ ಸಂಗೀತದ ದೇವಾಲಯ ಇದ್ದಂತಿದೆ’ ಎಂದು ಹೇಳಿದ್ದರು. ಅವರ ಮಾತು ಇಂದಿಗೂ ಸತ್ಯವೇ ಆಗಿ ಉಳಿದಿದೆ. ಇಂದಿಗೂ ಕೋಟೆ ಹೈಸ್ಕೂಲ್‌ ಮೈದಾನದಲ್ಲಿಯೇ ಸಂಗೀತೋತ್ಸವ ನಡೆಯುತ್ತಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ವರದರಾಜ್‌.

ಮೈಸೂರು ಒಡೆಯರ್‌ ಅವರು ಈ ಕಾರ್ಯಕ್ರಮವನ್ನು ‘ಜ್ಞಾನ ಗಾನ ಸಭಾ’ ಎಂದು ಕರೆದಿದ್ದಾರೆ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್ ಅವರು ‘ಕರ್ನಾಟಕದ ಹೆಮ್ಮೆಯ ಭಾರತದ ರಾಮೋತ್ಸವ’ ಎಂದು ಕರೆದಿದ್ದರು.

-ಸಭಿಕರನ್ನು ಸೆಳೆದ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯಿ ವಾದನ

ಕಛೇರಿ ಕೊಟ್ಟ ಕಲಾವಿದರು
ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್‌. ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಷಿ, ಬಾಲಮುರಳೀ ಕೃಷ್ಣ, ಯೇಸುದಾಸ್‌, ಎಂ. ಎಲ್‌. ವಸಂತಕುಮಾರಿ ಅವರ ಸಂಗೀತ ಕಛೇರಿಗಳಿದ್ದರೆ ಜನರು ಕಿಕ್ಕಿರಿದು ಸೇರುವುದು ಸಾಮಾನ್ಯ ಸಂಗತಿ. ದೇಶದ ಶ್ರೇಷ್ಠ ಸಂಗೀತಗಾರರ ಬಳಗವೇ ರಾಮಸೇವಾಮಂಡಳಿಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿ ಹೋಗಿದ್ದಾರೆ. ಟಿ. ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ಬಾಂಬೆ ಜಯಶ್ರೀ, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಹೊನ್ನಪ್ಪ ಭಾಗವತರ್‌, ಸಲೀಂ ದೇಸಿಖಾನ್‌, ಅಯ್ಯಮಣಿ ಅಯ್ಯರ್‌, ಜಿ.ಎನ್‌. ಬಾಲಸುಬ್ರಹ್ಮಣ್ಯ, ಎಂ.ಎ. ನರಸಿಂಹಾಚಾರ್‌, ಲಾಲ್‌ಗುಡಿ ಜಿ. ಜಯರಾಮನ್‌, ಟಿ.ಎಂ. ಕೃಷ್ಣ ಹೀಗೆ ರಾಮಸೇವಾಮಂಡಳಿಯ ವೇದಿಕೆಗೆ ಕಳೆಗಟ್ಟುವಂತೆ ಮಾಡಿದ ಪ್ರತಿಭಾವಂತ ಸಂಗೀತಗಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT