ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ಮತ್ತು ಮುಂದಿನ ಚುನಾವಣೆಗಳು

Last Updated 25 ಮೇ 2018, 19:30 IST
ಅಕ್ಷರ ಗಾತ್ರ

ಮೇ 12ರಂದು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಮೇ 13ರ ಸಂಚಿಕೆಯಲ್ಲಿ ಎಲ್ಲಾ ಪತ್ರಿಕೆಗಳು ವಿವರವಾಗಿ ದಾಖಲಿಸಿದ್ದವು. ಆದರೆ, ‘ಪ್ರಜಾವಾಣಿ’ಯಲ್ಲಿ ಬಂದ ವಿವರಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳಿದ್ದುವು. ಈ ಅಂಶಗಳನ್ನು ಓದುಗರು ಮರೆಯಬಾರದೆಂಬ ಕಾರಣಕ್ಕೆ ಈ ಪತ್ರ (ಈಗ, ಫಲಿತಾಂಶ ಬಂದ ನಂತರದನಾಟಕೀಯ ಬೆಳವಣಿಗೆಗಳು ಒಂದು ತಾರ್ಕಿಕ ಅಂತ್ಯ
ವನ್ನು ಕಂಡಿರುವುದರಿಂದ ‘ಪಕ್ಷ-ಪಾತ’ದ ಭೀತಿಯಿಲ್ಲದೆ ಈ ಎರಡು ಅಂಶಗಳನ್ನು ಚರ್ಚಿಸಬಹುದು).

ಮೊದಲನೆಯದು ಹೆಬ್ಬಾಳ ಕ್ಷೇತ್ರದ ಮತಗಟ್ಟೆ158/2ರಲ್ಲಿ ನಡೆದ ಘಟನೆ. ಅದರಲ್ಲಿ, ಮತದಾರರು ಒಂದು ಪಕ್ಷದ ಅಭ್ಯರ್ಥಿಗೆ ಮತ ಹಾಕಿದಾಗ ‘ವಿವಿಪ್ಯಾಟ್‌’ ನಲ್ಲಿ ಬೇರೊಂದು ಪಕ್ಷದ ಅಭ್ಯರ್ಥಿಯ ಚಿತ್ರ ಬರುತ್ತಿತ್ತು. ಮತದಾರರು ಈ ಅಂಶವನ್ನು ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಾಗ ಅಧಿಕಾರಿಗಳೇ ‘ಖುದ್ದಾಗಿ ಪರಿಶೀಲಿಸಿದಾಗ ಮತಯಂತ್ರದಲ್ಲಿ ಲೋಪವಿದ್ದುದು ಖಚಿತವಾಯಿತು’. ಬಳಿಕ ಮತದಾನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ತಂತ್ರಜ್ಞರನ್ನು ಕರೆಯಿಸಿ ಮತ ಯಂತ್ರವನ್ನು ಸರಿಪಡಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆ ‘ದೋಷಪೂರಿತ’ ಯಂತ್ರದಲ್ಲಿ ಆಗುತ್ತಿದ್ದ ತಪ್ಪಿನ ಸ್ವರೂಪ: ‘ಚಲಾಯಿಸಿದ ಪ್ರತಿ ಐದು ಮತಗಳಲ್ಲಿ ಎರಡು ಮತಗಳು ಬೇರೆಯವರಿಗೆ ಚಲಾವಣೆಯಾಗುತ್ತಿದ್ದುವು. ಹೆಚ್ಚಿನ ಮತಗಳು ಬಿಲ್ಲು ಬಾಣದ ಗುರುತಿಗೆ ಹೋಗುತ್ತಿದ್ದುವು’. ಎಂದರೆ ಈ ‘ದೋಷ’ದಲ್ಲಿ ಒಂದು ಕ್ರಮವಿದೆ; ‘ಪ್ರತಿ ಐದು ಮತಗಳಲ್ಲಿ ಎರಡು ಮತಗಳು ಬೇರೊಂದು ಪಕ್ಷಕ್ಕೆ ಹೋಗುತ್ತಿದ್ದುವು’ ಎಂದಾದರೆ ಈ ‘ದೋಷ’ವೂ ಯಾರದೋ ಹಸ್ತಕ್ಷೇಪದಿಂದಾಗಿರಬಹುದು ಎಂಬ ಸಂದೇಹವು ಸಹಜವಾಗಿ ಏಳುತ್ತದೆ. ಇದು ಯಾಂತ್ರಿಕ ದೋಷ ಎಂದು ಭಾವಿಸಿದರೂ, ಯಾವ ದೋಷಪೂರಿತ ಸ್ಥಿತಿಯಲ್ಲಿ ಯಂತ್ರಗಳು ಹೀಗೆ ಮಾಡುತ್ತವೆ ಎಂಬುದನ್ನು ಉನ್ನತ ತಂತ್ರಜ್ಞರು ತಿಳಿದುಕೊಳ್ಳುವುದು ಕಷ್ಟವೇನಲ್ಲ. ಅಂತಹ ಸ್ಥಿತಿಯಲ್ಲಿ ಇರುವ ಶೇ 20–30 ಮತಯಂತ್ರಗಳನ್ನು ಆಯಕಟ್ಟಿನ ಸೂಕ್ಷ್ಮ ಮತಗಟ್ಟೆಗಳಲ್ಲಿ ಇಟ್ಟರೆ ಸಾಕು, ಒಟ್ಟಾರೆ ಮತದಾನದ ಫಲಿತಾಂಶ ಮತದಾರರ ಉದ್ದೇಶಕ್ಕೆ ವಿರುದ್ಧವಾಗುತ್ತದೆ.

‘ಅಯ್ಯೋ! ಇಂತಹ ಹಸ್ತಕ್ಷೇಪವನ್ನು ತಪ್ಪಿಸುವುದಕ್ಕಾಗಿಯೇ ಸುಪ್ರೀಂ ಕೋರ್ಟ್ ವಿವಿಪ್ಯಾಟ್ ಕಡ್ಡಾಯ ಮಾಡಿರುವುದು; ಆದುದರಿಂದ ಈ ಚರ್ಚೆ ಅನವಶ್ಯಕ’ ಎಂಬ ಆಕ್ಷೇಪಕ್ಕೆ ಉತ್ತರ ಇದೇ ಪತ್ರಿಕೆಯಲ್ಲಿ ಬಂದ ಎರಡನೆಯ ಘಟನೆಯಲ್ಲಿದೆ.

ಚೇತನಕೃಷ್ಣ ಎಂಬುವರು ಮತದಾನ ಮಾಡಿದಾಗ ವಿವಿಪ್ಯಾಟ್‍ನಲ್ಲಿ ಬೇರೊಬ್ಬ ಅಭ್ಯರ್ಥಿಯ ಚಿಹ್ನೆ ಕಾಣಿಸಿತು. ಅವರು ಅಧಿಕಾರಿಗಳ ಗಮನಕ್ಕೆ ಈ ಅಂಶವನ್ನು ತಂದಾಗ, ‘ನಿಮಗೆ ಇನ್ನೊಮ್ಮೆ ಮತ ಹಾಕಲು ಅವಕಾಶ ಕೊಡಲಾಗುತ್ತದೆ. ಆದರೆ ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಹೇಳಿ ನಮ್ಮ ಸಮ್ಮುಖದಲ್ಲೇ ಗುಂಡಿ ಒತ್ತಬೇಕು. ಒಂದು ವೇಳೆ ನೀವು ಹಾಕಿದ ಅಭ್ಯರ್ಥಿಯ ಚಿಹ್ನೆಯೇ ವಿವಿಪ್ಯಾಟ್‍ನಲ್ಲಿ ಕಾಣಿಸಿಕೊಂಡರೆ ನೀವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಅಧಿಕಾರಿಗಳು ಅವರನ್ನು ಎಚ್ಚರಿಸಿದರು. ಶಿಕ್ಷೆಯ ಭಯವಿದ್ದರೂ ಧೈರ್ಯ
ವಾಗಿ ಚೇತನಕೃಷ್ಣ ಅಧಿಕಾರಿಗಳು ಹೇಳಿದಂತೆಯೇ ಮಾಡಿದಾಗ ಅವರ ಮತವು ಬೇರೊಬ್ಬರಿಗೆ ಹೋಯಿತು, ಮತ್ತು ಅಧಿಕಾರಿಗಳು ಯಂತ್ರದಲ್ಲಿ ದೋಷವಿದೆ ಎಂದು ಒಪ್ಪಿಕೊಂಡರು.

ಎಷ್ಟು ಜನ ಮತದಾರರಿಗೆ ಅಧಿಕಾರಿಗಳ ಈ ಸವಾಲನ್ನುಎದುರಿಸುವ ಧೈರ್ಯವಿರುತ್ತದೆ? ಹಾಗೆ ನೋಡಿದರೆ, ಎಷ್ಟು ಮತದಾರರು ವಿವಿಪ್ಯಾಟ್‍ ಅನ್ನು ಗಮನಿಸಿ, ತಮ್ಮ ಮತ ಸರಿಯಾಗಿ ಚಲಾವಣೆಯಾಗಿದೆಯೇ ಎಂದು ಗಮನಿಸುತ್ತಾರೆ? ಸದ್ಯ, ಮತ ಹಾಕಿದರೆ ಸಾಕು; ಇಲ್ಲದ ಉಸಾಬರಿ ನಮಗೇಕೆ? ಎಂದೇ ಹೆಚ್ಚಿನ ಮತದಾರರು ಗುಂಡಿಯನ್ನು ಒತ್ತಿ, ಕೂಡಲೇ ಮತಕಟ್ಟೆಯಿಂದ ಹೊರಬರುತ್ತಾರೆ (ನಾನೂ ಮತವನ್ನು ಚಲಾಯಿಸಿದ್ದೇನೆ; ಆದರೆ, ನನ್ನ ಮುಂದೇನಾದರೂ ಚೇತನಕೃಷ್ಣ ಅವರು ಎದುರಿಸಿದ ಸವಾಲು ಬಂದಿದ್ದರೆ, ಅವರಷ್ಟು ಧೈರ್ಯದಿಂದ ಮುಂದುವರೆಯುತ್ತಿದ್ದೆನೇ?- ಪ್ರಾಯಃ ಇಲ್ಲ). ಆದರೆ, ಶಿಕ್ಷೆಯ ಭೀತಿಯಿಲ್ಲದಿದ್ದರೆ, ಕಿಡಿಗೇಡಿಗಳು ವಿನಾಕಾರಣ ಆಕ್ಷೇಪವೆತ್ತಿ ಮತದಾನ ಪ್ರಕ್ರಿಯೆಯನ್ನೇ ನಿಲ್ಲಿಸಬಹುದು. ಈ ಇಬ್ಬಗೆಯ ಸಾಧ್ಯತೆಗಳನ್ನು ಸರಿಪಡಿಸುವುದು ಹೇಗೆ?

ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವೆಂದರೆ, ವಿದ್ಯುನ್ಮಾನ ಮತಯಂತ್ರಗಳನ್ನು ದೂರವಿಟ್ಟು, ಹಿಂದಿನಂತೆ ಬ್ಯಾಲೆಟ್ ಪೇಪರ್ ಪದ್ಧತಿಯನ್ನೇ ಮತ್ತೆ ಚಲಾವಣೆಗೆ ತರುವುದು. ನಿಜ, ಆ ಪದ್ಧತಿಯಲ್ಲಿ ಮತಎಣಿಕೆ ತುಂಬಾ ಸಮಯವನ್ನು (ದಿನಗಳನ್ನು) ತೆಗೆದುಕೊಳ್ಳುತ್ತದೆ ಮತ್ತು ಫಲಿತಾಂಶ ಘೋಷಣೆ ಬಹಳ ತಡವಾಗುತ್ತದೆ. ಆದರೂ, ಪ್ರಾಯಃ, ಆ ‘ಹಿಂದುಳಿದ’ ಪದ್ಧತಿಯೇ ಚುನಾವಣೆಗಳನ್ನು ಹೆಚ್ಚು ನ್ಯಾಯಸಮ್ಮತವಾಗಿಸುತ್ತದೆ ಎಂದು ಕಾಣುತ್ತದೆ.
ತಜ್ಞರೆಲ್ಲರೂ ಈ ವಿಷಯವನ್ನು ಕುರಿತು ಚಿಂತಿಸಬೇಕೆಂದು ನಾನು ಕಳಕಳಿಯಿಂದ ಕೋರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT