ಆಲಮಟ್ಟಿ: ಕಳೆದ ಫೆ 12 ರಿಂದ ಬಂದಾಗಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಇಲ್ಲಿಯ ಸಂಗೀತ ಕಾರಂಜಿಯ ನವೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಈ ತಿಂಗಳಾತ್ಯಕ್ಕೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.
2008 ರಲ್ಲಿ ಆರಂಭಗೊಂಡಿದ್ದ ರಾಜ್ಯದ ಅತಿ ದೊಡ್ಡ ಸಂಗೀತ ಕಾರಂಜಿಗೆ ಇದೇ ಮೊದಲ ಬಾರಿಗೆ ಆಧುನೀಕರಣ ಭಾಗ್ಯ ದೊರೆಕಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಸುಮಾರು ₹ 1.8 ಕೋಟಿ ವೆಚ್ಚದಲ್ಲಿ ಈ ನವೀಕರಣ ಕಾರ್ಯ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ.
ಬೇಸಿಗೆ ಯಲ್ಲಿ ಪ್ರವಾಸಿಗರಿಗೆ ಸಂಗೀತ ಕಾರಂಜಿ ಇಲ್ಲದೆ ನಿರಾಶೆಯಾಗಿದೆ. ದುರಸ್ತಿ ಕಾರ್ಯ ಆರಂಭಗೊಂಡು ಮೂರುವರೆ ತಿಂಗಳಾಗಿದ್ದು ಇನ್ನೂ ಪೂರ್ಣಗೊಂಡಿಲ್ಲ.
ದುರಸ್ತಿ ಕಾರ್ಯಕ್ಕೆ ಬಿಸಿಲು ಅಡ್ಡಿ: ಸಂಗೀತ ಕಾರಂಜಿಯ ದುರಸ್ತಿಗೆ ಬಿಸಿಲಿನ ಪ್ರಖರತೆ ಅಡ್ಡಿಯಾಗಿದೆ. ನೆತ್ತಿ ಸುಡುವ ಬಿಸಿಲಿನಲ್ಲಿ ಕಾರಂಜಿಯ ಪೈಪ್ನ ಕಾರ್ಯನಿರ್ವಹಿಸಬೇಕಿರುವುದರಿಂದ ತೀವ್ರ ತೊಂದರೆಯಾಗಿದೆ.
‘ಅದಕ್ಕಾಗಿ ನಸುಕಿನ ಜಾವ 4 ಗಂಟೆಯಿಂದ 11 ರವರೆಗೆ, ಸಂಜೆ 4 ರಿಂದ ರಾತ್ರಿ 11 ರವರೆಗೆ ತಾಂತ್ರಿಕ ನೈಪುಣ್ಯವುಳ್ಳ ಕಾರ್ಮಿಕರು ಕಾರ್ಯ ನಿರ್ವಹಿಸಿದ ಪರಿಣಾಮ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಸಣ್ಣ ಸಣ್ಣ, ಕೈಹಿಡಿ ಯುವ ಕೆಲಸವಾಗಿದ್ದರಿಂದ ಕಾಮಗಾರಿ ತಡವಾಗುತ್ತಿದೆ’ ಎಂದು ಕಾರ್ಮಿಕರು ಒಬ್ಬರು ತಿಳಿಸಿದರು.
ಹಾಡಿನ ಥೀಮ್ಸ್ ಅಂತಿಮ: ಸಂಗೀತ ಕಾರಂಜಿಯ ಸಾಫ್ಟವೇರ್ ಕೂಡಾ ಅಪಡೇಟ್ ಮಾಡಲಾಗಿದ್ದು, ಹೊಸ, ಹೊಸ ಹಾಡಿನ ಸಂಯೋಜನೆ ಮಾಡ ಲಾಗಿದೆ.
ಒಟ್ಟು ಐದೈದು ಹಾಡಿನ ಐದು ಸೆಟ್ ಥೀಮ್ಗಳನ್ನು, ಅದಕ್ಕೆ ಸಂಬಂಧಿಸಿದ ಸಾಫ್ಟ್ವೇರ್ ಕೂಡಾ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಪರಿಶೀಲಿಸಿ ಹಾಡುಗಳನ್ನು ಅಂತಿಮ ಗೊಳಿಸುತ್ತಾರೆ. ಮೊದಲಿನ ಕಬ್ಬಿಣ ಪೈಪ್ ತೆಗೆದು ಪ್ಲಾಸ್ಟಿಕ್ ಪೈಪ್ ಅಳವಡಿಸ ಲಾಗುತ್ತಿದೆ ಎಂದು ಸಹಾಯಕ ಎಂಜಿನಿಯರ್ ಶಂಕ್ರಯ್ಯ ಮಠಪತಿ ತಿಳಿಸಿದರು.
ಏನೆಲ್ಲ ಕಾಮಗಾರಿ?
ಸಂಗೀತ ಕಾರಂಜಿಯ ಲೈಟಿಂಗ್ ವ್ಯವಸ್ಥೆ ಸಂಪೂರ್ಣ ಬದಲಾವಣೆ, ನೂತನ ಆರ್ಜಿಬಿ ತಂತ್ರಜ್ಞಾನ (ಆರ್ಜಿಬಿ- ಅಂದರೆ ಕೆಂಪು, ಹಸಿರು, ಬಿಳಿ)ದ ಲೈಟಿಂಗ್ನ್ನು ನೀರಿನಲ್ಲಿ ಅಳವಡಿಕೆ, ಜನ ಕುಳಿತು ವೀಕ್ಷಿಸುವ ಸ್ಟೇಡಿಯಂನಲ್ಲಿಯೂ ಕೆಳಮಟ್ಟದಲ್ಲಿ ಪಾದಚಾರಿ ರಸ್ತೆಯಲ್ಲಿಯೂ ಪೆಡೆಲ್ ಲೈಟಿಂಗ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ.
ಆರ್ಜಿಬಿ ಎನ್ನುವುದು ಮೂರು ಬಣ್ಣವಾಗಿದ್ದು, ಈ ಮೂರು ಬಣ್ಣಗಳ ಸಂಯೋಜನೆಯಿಂದ ಸಹಸ್ರಾರು ಬೇರೆ ಬೇರೆ ಬಣ್ಣಗಳು ಉತ್ಪತ್ತಿಯಾಗುತ್ತವೆ.
ಧ್ವನಿ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಡಾಲ್ಬಿ ಸೌಂಡ್ ಸಿಸ್ಟಮ್ ಅಳವಡಿಸಲಾಗುತ್ತಿದ್ದು, ಇಡೀ ಸಂಗೀತ ಕಾರಂಜಿಯ 16 ಕಡೆ ಕೂಡಿಸಲಾಗಿರುವ ಸೌಂಡ್ ಸಿಸ್ಟಮ್ ಡಿಜಟಲೀಕರಣಗೊಳಿಸಿ ಡಾಲ್ಬಿ ಧ್ವನಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಪೈಪ್ ಬದಲಾವಣೆಗೆ ಕಾಮಗಾರಿ ಮಾತ್ರ ಬಾಕಿಯಿದ್ದು, ಅದು ಕೂಡಾ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
**
ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ದಿನ ಪ್ರಾಯೋಗಿಕವಾಗಿ ಆರಂಭಿಸಿ, ಮೇ 25 ರೊಳಗೆ ಸಂಗೀತ ಕಾರಂಜಿ ಆರಂಭಿಸಲು ಪ್ರಯತ್ನಿಸಲಾಗುವುದು
– ಎಸ್.ಎ.ಇನಾಮದಾರ ಕಾರ್ಯನಿರ್ವಾಹಕ ಎಂಜಿನಿಯರ್
ಚಂದ್ರಶೇಖರ ಕೋಳೇಕರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.