
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿಲ್ಲಿ ಭಾನುವಾರ ನೀರು ಕುಡಿಯಲು ಹೋದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ಸಮೀಪದ ನಗನೂರಿಲ್ಲಿ ಮಾರ್ಚ್ 29ರಂದು ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದು, ಕೃಷಿ ಹೊಂಡಕ್ಕೆ ಬೇಲಿ ಹಾಕಿಸಲು ನಿಯಮ ರೂಪಿಸಬೇಕು ಎಂದು ಹೇಳಿದ್ದರು. ಕೃಷಿ ಹೊಂಡಗಳ ಸುತ್ತ ಬೇಲಿ ನಿರ್ಮಿಸುವುದನ್ನು ಕೃಷಿ ಇಲಾಖೆ ಈಗಾಗಲೇ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಪ್ರೋತ್ಸಾಹ ಧನವನ್ನೂ ನೀಡುತ್ತಿದೆ. ಆದರೆ, ನಿಯಮಗಳನ್ನು ರೈತರು ಪಾಲಿಸುತ್ತಿಲ್ಲ, ಇಲಾಖೆ ಅಧಿಕಾರಿಗಳು ಇದನ್ನು ಗಮನಿಸುತ್ತಿಲ್ಲ ಎಂಬ ಆರೋಪ ಇದೆ.

ಭದ್ರ ಬೇಲಿ ನಿರ್ಮಿಸಿರುವ ಕೃಷಿ ಹೊಂಡಕ್ಕೊಂದು ಉದಾಹರಣೆ ಈ ಹೊಂಡ
ಕೃಷಿ ಹೊಂಡದ ಸುತ್ತ ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ, ಹೊಂಡದ ಸಮೀಪದಲ್ಲೇ ಸಣ್ಣದೊಂದು ತೊಟ್ಟಿ ನಿರ್ಮಾಣ ಮಾಡಬೇಕು. ಹೊಂಡಕ್ಕೆ ಹರಿಸುವ ನೀರು, ಮೊದಲು ಈ ತೊಟ್ಟಿಗೆ ಹೋಗಿ, ಅಲ್ಲಿಂದ ಹೊಂಡ ತಲುಪಬೇಕು. ಸಣ್ಣ ತೊಟ್ಟಿಯಲ್ಲಿ ಸದಾ ನೀರಿರಬೇಕು. ಹೀಗೆ ಮಾಡುವುದರಿಂದ ನೀರಿಗಾಗಿ ಹೊಂಡದ ಬಳಿ ಹೋಗುವ ಬದಲು ತೊಟ್ಟಿಯಿಂದಲೇ ತುಂಬಿಕೊಳ್ಳುತ್ತಾರೆ. ಇದರಿಂದ ಜನ–ಜಾನುವಾರುಗಳ ಸಾವುಗಳನ್ನು ತಪ್ಪಿಸಬಹುದು.-ಸೀಕಲ್ ರಮಣ ರೆಡ್ಡಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ
ಕೃಷಿ ಹೊಂಡದ ಸುತ್ತ ಬೇಲಿ ಹಾಕಬೇಕೆಂದು ಕೃಷಿ ಇಲಾಖೆಯ ಆದೇಶದಲ್ಲಿದೆ. ಹೊಂಡದ ಸುತ್ತ ಹಗ್ಗ ಇಳಿಬಿಡುವುದು, ಗಾಳಿ ತುಂಬಿರುವ ಟ್ಯೂಬ್ಗಳನ್ನು ಹೊಂಡದಲ್ಲಿ ಹಾಕಬೇಕು ಎಂಬ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಹೊಂಡದ ಆಳ ಕನಿಷ್ಠ 10 ಅಡಿ ಇರುತ್ತದೆ. ಹೊಂಡಕ್ಕೆ ಹೊದಿಸಿರುವ ಪ್ಲಾಸ್ಟಿಕ್ ಶೀಟ್ ಜಾರುತ್ತದೆ. ನಿಯಮಾನುಸಾರ ರಕ್ಷಣಾ ಕ್ರಮಗಳನ್ನು ಅನುಸರಿಸುವುದರಿಂದ ಜೀವಗಳನ್ನು ಉಳಿಸಬಹುದು. ಬೇಲಿಯ ಜೊತೆಗೆ, ಹೂವು, ಹಣ್ಣು, ತರಕಾರಿ ಗಿಡಗಳನ್ನು ನೆಡಬಹುದು. ಮೇವಿನ ಗಿಡಗಳನ್ನೂ ಬೆಳೆಸಬಹುದು. ಇದರಿಂದ ಹೊಂಡಕ್ಕೆ ರಕ್ಷಣೆಯೂ ಆಗುತ್ತದೆ.-ಆರ್.ಜಿ.ಗೊಲ್ಲರ್, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.