‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಕ್ಕೆ ಭಗತ್ ಸಿಂಗ್ ಅವರನ್ನು ಬ್ರಿಟಿಷ್ ಪೊಲೀಸರು ಕಟ್ಟಿ ಹೊಡೆಯುತ್ತಿರುವ ಚಿತ್ರ ನೋಡಿ. ಭಾರತೀಯರೆಲ್ಲರಲ್ಲೂ ಭಯ ಹುಟ್ಟಿಸಲು ಈ ಚಿತ್ರವನ್ನು ಅಂದು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಗಾಂಧೀಜಿ, ನೆಹರೂ ಯಾವತ್ತಾದರೂ ಈ ರೀತಿ ಶಿಕ್ಷೆ ಅನುಭವಿಸುತ್ತಿರುವ ಚಿತ್ರ ನೋಡಿದ್ದೀರಾ? ಕೇವಲ ಚರಕ ತಿರುಗಿಸುವುದರಿಂದ ಸ್ವಾತಂತ್ರ್ಯ ಬಂತು ಎಂದರೆ ನಂಬಬೇಕೆ?’ ಎಂದು ಹೇಳಿರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರ ಜತೆ ಸಿಖ್ ವ್ಯಕ್ತಿಯೊಬ್ಬನನ್ನು ಏಣಿಗೆ ಕಟ್ಟಿ ಹಾಕಿ, ಅರೆಬೆತ್ತಲುಗೊಳಿಸಿ ಪೊಲೀಸರು ಹೊಡೆಯುತ್ತಿರುವ ಚಿತ್ರವೂ ವೈರಲ್ ಆಗಿದೆ.
‘ಇದು 1920ರಲ್ಲಿ ಬ್ರಿಟನ್ನಲ್ಲಿ ಪ್ರಕಟವಾಗಿದ್ದ ‘ಬ್ರಿಟಿಷ್ ಟೆರರ್ ಇನ್ ಇಂಡಿಯಾ’ ಪುಸ್ತಕದಲ್ಲಿರುವ ಚಿತ್ರ. ಅದನ್ನು ತಿರುಚಿ, ದಿನಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ ಮಾರ್ಪಾಡು ಮಾಡಲಾಗಿದೆ. ಇದು 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ, ಪಂಜಾಬ್ನ ಕಸೂರ್ನಲ್ಲಿ ಜನಸಾಮಾನ್ಯರ ಮೇಲೆ ಬ್ರಿಟಿಷ್ ಪೊಲೀಸರು ನಡೆಸಿದ ದೌರ್ಜನ್ಯದ ಚಿತ್ರ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ. ಇಂತಹ ಎರಡು ಚಿತ್ರಗಳನ್ನು ಬ್ರಿಟಿಷ್ ಪತ್ರಕರ್ತ ಬೆಂಜಮಿನ್ ಹಾರ್ನಿಮ್ಯಾನ್ ಪೊಲೀಸರ ಕಣ್ಣುತಪ್ಪಿಸಿ, ಬ್ರಿಟನ್ಗೆ ಕಳ್ಳಸಾಗಣೆ ಮಾಡಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಾಗ ಭಗತ್ ಸಿಂಗ್ ಅವರಿಗೆ ಕೇವಲ 12 ವರ್ಷ. ಆದರೆ ಚಿತ್ರದಲ್ಲಿರುವ ವ್ಯಕ್ತಿಯು ಯುವಕನಾಗಿದ್ದಾನೆ. ಅದು ಭಗತ್ ಸಿಂಗ್ ಅಲ್ಲ. ಅದೇ ಚಿತ್ರಗಳನ್ನು ಈಗ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.