2022ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೆ ರಾಜಕೀಯ ಪಕ್ಷಗಳ ಬಿರುಸಿನ ತಯಾರಿ ನಡೆದಿದ್ದು, ರಾಜಕೀಯ ನಾಯಕರು ಜನರ ಮನವೊಲಿಸುವ ಯತ್ನದಲ್ಲಿ ತೊಡಗಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಾಡಿರುವ ಒಂದು ಟ್ವೀಟ್ ಸದ್ಯ ಸುದ್ದಿಗೆ ಗ್ರಾಸವಾಗಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ರಾಮಮಂದಿರ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಇದರ ಸ್ಕ್ರೀನ್ಶಾಟ್ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಖಿಲೇಶ್ ಅವರ ಟ್ವಿಟರ್ ಖಾತೆಯನ್ನು ಸಂಪೂರ್ಣ ಪರಾಮರ್ಶೆ ನಡೆಸಿದರೂ ಬಾಬರಿ ಮಸೀದಿ ಕಟ್ಟುವುದಾಗಿ ಘೋಷಿಸಿದ ಟ್ವೀಟ್ ಪತ್ತೆಯಾಗಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಒಂದು ವೇಳೆ ಅದು ಡಿಲೀಟ್ ಆಗಿದ್ದರೂ, ಆರ್ಕೈವ್ನಲ್ಲಿ ಇರಬೇಕಿತ್ತು. ಅದು ಅಲ್ಲಿಯೂ ಲಭ್ಯವಿಲ್ಲ. ಹೀಗಾಗಿ ಇದು ನಕಲಿ ಟ್ವೀಟ್ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವೆಬ್ಸೈಟ್ ತಿಳಿಸಿದೆ. ಅಖಿಲೇಶ್ ಅವರ ಅಸಲಿ ಖಾತೆಯ ಟ್ವೀಟ್ ಹಾಗೂ ವೈರಲ್ ಆಗಿರುವ ಟ್ವೀಟ್ನ ಸ್ವರೂಪದಲ್ಲಿ ಸಾಮ್ಯತೆ ಇಲ್ಲ ಎಂಬ ಅಂಶ ಕಂಡುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.