ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಎಂಬ ಕಾರಣಕ್ಕೆ, ಡಿ.ಜೆ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಹರೀಶ್ ಕುಮಾರ್ ಎಂಬಾತನನ್ನು ಹೈದರಾಬಾದ್ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳುವ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಸಂಘರ್ಷ್ ಸತ್ಯ್ಕೇಲಿಯೆ’ ಹಾಗೂ ‘ಹಿಂದೂ ಪೋಸ್ಟ್’ ಎಂಬ ಖಾತೆಗಳಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಮುಸ್ಲಿಂ ಮಹಿಳೆಯ ಅಣ್ಣ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಮದುವೆಯಾದ ಬಳಿಕ ಪತ್ನಿಯ ಕುಟುಂಬದಿಂದ ಹರೀಶ್ ಹತ್ಯೆ ನಡೆದಿದೆ ಎಂದೂ ಹೇಳಲಾಗಿದೆ. ಆದರೆ, ಈ ಎಲ್ಲ ಆರೋಪಗಳೂ ಸುಳ್ಳು.
ಹತ್ಯೆಯಾದ ವ್ಯಕ್ತಿ ಹಾಗೂ ಹತ್ಯೆ ಮಾಡಿದ ವ್ಯಕ್ತಿ ಒಬ್ಬರೂ ಒಂದೇ ಧರ್ಮಕ್ಕೆ ಸೇರಿದವರು ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ. ತೆಲಂಗಾಣದ ದೂಲಪಲ್ಲಿ ಎಂಬಲ್ಲಿ, ತನ್ನ ತಂಗಿಯ ಜೊತೆ ಓಡಿಹೋದ ಎಂಬ ಕಾರಣಕ್ಕೆ ಹರೀಶ್ ಕುಮಾರ್ ಎಂಬಾತನನ್ನು ದೀನ್ದಯಾಳ್ ಎಂಬಾತ ಮಾರ್ಚ್ 1ರಂದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಸಂಬಂಧ ದಯಾಳ್ ಹಾಗೂ ಆತನ ಒಂಬತ್ತು ಸ್ನೇಹಿತರನ್ನು ತೆಲಂಗಾಣದ ಪೀತಬಷೀರಾಬಾದ್ ಪೊಲೀಸರು ಬಂಧಿಸಿದ್ದ ಸುದ್ದಿಯನ್ನು ಪ್ರಮುಖ ಪತ್ರಿಕೆಗಳು ವರದಿ ಮಾಡಿದ್ದವು. ಈ ಪ್ರಕರಣದಲ್ಲಿ ಅನ್ಯಕೋಮಿನ ವಿಚಾರ ಅಪ್ರಸ್ತುತ ಎಂದು ಠಾಣೆಯ ಇನ್ಸ್ಪೆಕ್ಟರ್ ಗೌರಿ ಪ್ರಶಾಂತ್ ಅವರು ತಿಳಿಸಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.