ವಿವಿಧ ಬಗೆಯ ರುಚಿಕರ ಖಾದ್ಯಗಳಿಂದ ಜನರನ್ನು ಸದಾ ಕೈಬಿಸಿ ಕರೆಯುವ ಬೆಂಗಳೂರು- ಮೈಸೂರು ಹೆದ್ದಾರಿಯ ಬನಶ್ರೀ ಗ್ರಾಂಡ್ ರೆಸ್ಟೋರೆಂಟ್ ಈ ಭಾಗದಲ್ಲಿ ಜನಪ್ರಿಯ.
ಬಗೆಬಗೆಯ ದೋಸೆಗಳು, ಉತ್ತರ ಮತ್ತು ದಕ್ಷಿಣ ಭಾರತ ಶೈಲಿಯ ಖಾದ್ಯಗಳು, ಚೈನೀಸ್ ಚಾಟ್ಸ್, ವಿವಿಧ ಹಣ್ಣಿನ ರಸಗಳು, ಡ್ರೈಪ್ರೂಟ್ಸ್ ಐಸ್ಕ್ರೀಂಗಳು ಇಲ್ಲಿ ಫೇಮಸ್.
ಮೈಸೂರು ರಸ್ತೆಯ ಅಂಚೆಪಾಳ್ಯದ ಶ್ರೀಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯ ಎದುರು ಇರುವ ಈ ರೆಸ್ಟೋರೆಂಟ್ನಲ್ಲಿ ರೋಟಿ ಕರಿ ವಿಶೇಷ ಖಾದ್ಯ. ವಿವಿಧ ಬಗೆಯ ರೋಟಿ ಕರಿ, ತರಕಾರಿ ರೊಟ್ಟಿ, ಪನೀರ್ ವೆಜ್ ಮಶ್ರುಂ ಸೇರಿದಂತೆ ವಿವಿಧ ಬಗೆಯ ತರಕಾರಿ ಸಲಾಡ್ ಮಾಡಿಕೊಡಲಾಗುತ್ತದೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲೀಕರು.
ಅಡುಗೆಗೆ ಸನ್ಪ್ಯೂರ್ ಆಯಿಲ್ ಬಳಸುತ್ತೇವೆ. ಇಲ್ಲಿಗೆ ಬರುವವರು ಗೋಬಿ ಮಂಚೂರಿ ಸವಿಯದೆ ಹೋಗುವುದಿಲ್ಲ. ಊಟಕ್ಕೆ ಪ್ರತಿ ದಿನ ಒಂದೊಂದು ರೀತಿಯ ಸಿಹಿ ಮತ್ತು ರೋಟಿ, ಚಪಾತಿ ಲಭ್ಯವಿರುತ್ತದೆ. ಪ್ರವಾಸಕ್ಕೆ ಹೋಗುವ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಊಟ ನೀಡಲಾಗುತ್ತದೆ. ಆಸ್ಪತ್ರೆ ಮತ್ತು ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳಿಗೂ ರಿಯಾಯಿತಿ ದರದಲ್ಲಿ ಊಟ, ತಿಂಡಿಯನ್ನು ಈ ಹೋಟೆಲ್ ಸರಬರಾಜು ಮಾಡುತ್ತಿದೆ.
ಕಾಫಿ, ಟೀ, ಹಾಲು, ಜ್ಯೂಸ್, ಬಿಸಿ ಪಾನಿಯಗಳು, ವಿವಿಧ ಬಗೆಯ ಜ್ಯೂಸ್, ಪಾನಿಪುರಿ, ಬೇಲ್ಪುರಿ, ದಹಿಪುರಿ, ಬಂಗಾರಪೇಟೆ ಮಾದರಿಯ ಚಾಟ್ಗಳೂ ಸಿಗುತ್ತವೆ.
ಬೆಳಗಿನ ತಿಂಡಿಗೆ ಅವಲಕ್ಕಿ, ಉಡುಪಿ ಉತ್ತಪ್ಪ, ಬಿಸಿಬೇಳೆಬಾತ್, ವಾಂಗಿಬಾತ್, ಪಲಾವ್, ರೈಸ್ ಬಾತ್, ಪೊಂಗಲ್ ಮತ್ತಿತರ ಎಲ್ಲಾ ರೀತಿಯ ತಿಂಡಿ ತಿನಿಸುಗಳಿಗೆ ನಂದಿನಿ ತುಪ್ಪವನ್ನು ಬಳಸಲಾಗುತ್ತದೆ ಎನ್ನುತ್ತಾರೆ ಮಾಲೀಕರಾದ ಅಣ್ಣಪ್ಪ. ನಿಮಗೆ ಬೇಕೆನಿಸಿದ ಯಾವುದೇ ತಿಂಡಿ ತಿನಿಸಿಗಳು ಇಲ್ಲಿ ಬಿಸಿಬಿಸಿಯಾಗಿ ದೊರೆಯುತ್ತವೆ. ಮನೆಯಲ್ಲೇ ಮಾಡಿದ ಊಟ, ತಿಂಡಿಯ ಸ್ವಾದವನ್ನು ಹೊಂದಿರುವ ಇಲ್ಲಿನ ಖಾದ್ಯಗಳು ಮತ್ತೆ ಮತ್ತೆ ಸವಿಯಲು ಗ್ರಾಹಕರನ್ನು ಆಕರ್ಷಿಸುತ್ತವೆ ಎನ್ನುತ್ತಾರೆ ಅವರು.
ಆಯಾ ದಿನಕ್ಕೆ ಎಷ್ಟು ಅಗತ್ಯವೋ ಅಷ್ಟೇ ಪ್ರಮಾಣದ ಹಣ್ಣು, ತರಕಾರಿ, ಹಾಲು, ಮೊಸರು, ದಿನಸಿ ಪದಾರ್ಥಗಳನ್ನು ಕೆ.ಅರ್. ಮಾರುಕಟ್ಟೆ, ಹಾಪ್ಕಾಮ್ಸ್, ಯಶವಂತಪುರ ಎ.ಪಿ.ಎಂ.ಸಿ ಯಿಂದ ನೇರವಾಗಿ ತರಲಾಗುತ್ತದೆ.
ಕುಂದಾಪುರ ತಾಲ್ಲೂಕು ಶಂಕರನಾರಾಯಣ ಉಳ್ಳೂರು ಗ್ರಾಮದವರಾಗಿರುವ ಮಾಲೀಕರಿಗೆ ಹೋಟೆಲ್ ಉದ್ಯಮದಲ್ಲಿ 20 ವರ್ಷಗಳ ಅನುಭವ. ಮಾಲೀಕ ಅಣ್ಣಪ್ಪ ಪ್ರಾರಂಭದ ದಿನಗಳಲ್ಲಿ ಬಾಣಸಿಗನಾಗಿ ಕೆಲಸ ನಿರ್ವಹಿಸಿ ಹಂತ ಹಂತವಾಗಿ ಬೆಳೆದು ತನ್ನಲ್ಲೇ ಚಿಗುರಿದ ಸ್ವಂತ ಉದ್ಯಮದ ಕನಸನ್ನು ನನಸು ಮಾಡಿಕೊಂಡವರು. ಜತೆಗೆ 20ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಇವರ ದುಡಿಮೆಗೆ ಪತ್ನಿ ಉಷಾ ಸಹಕಾರವೂ ಇದೆ.
ಈ ಹೋಟೆಲ್ನ ಮಾಲೀಕರು ವರ್ಷದಲ್ಲಿ ಎರಡು ಬಾರಿ ಅನಾಥಾಶ್ರಮ, ವೃದ್ಧಾಶ್ರಮ, ಅಂಗವಿಕಲ ಶಾಲೆಗಳಿಗೆ ಉಚಿತವಾಗಿ ಊಟ, ತಿಂಡಿ ನೀಡಿ ಸೇವಾ ಮನೋಭಾವ ಮೆರೆಯುತ್ತಿದ್ದಾರೆ. ಬಾಲ್ಯದಿಂದಲೂ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಅವರು ನಗರದಲ್ಲಿ ಎಲ್ಲೇ ಯಕ್ಷಗಾನ ಕಾರ್ಯಕ್ರಮ, ಕರಾವಳಿ ಉತ್ಸವಗಳು ನಡೆದರೂ ಅಲ್ಲಿ ಭಾಗವಹಿಸುತ್ತಾರೆ.
**
ಹೋಟೆಲ್: ಬನಶ್ರೀ ಗ್ರಾಂಡ್ ರೆಸ್ಟೋರೆಂಟ್
ವಿಶೇಷ ತಿನಿಸು: ರೋಟಿ ಕರಿ
ವಿಳಾಸ: ಅಂಚೆಪಾಳ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.