ಪಾಲಿಕೆ, ಪ್ರತಿನಿತ್ಯ ಸಾಕಷ್ಟು ಸಂಖ್ಯೆಯ ಸಾರ್ವಜನಿಕರು ಎಡತಾಕುವ ಸ್ಥಳ. ಆದರೆ ಈಗ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ವಾಹನಗಳನ್ನು ಆವರಣದಲ್ಲಿ ತರುವಂತಿಲ್ಲ. ನೀರು ಬಂದಿಲ್ಲ; ಕಂದಾಯ ಕಟ್ಟಬೇಕು ಎಂದು ಹತ್ತಾರು ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರನ್ನೂ ಪೊಲೀಸರು ತಡೆದು ತಪಾಸಣೆ ಮಾಡುತ್ತಿದ್ದಾರೆ. ಇದಕ್ಕೆ ತಕರಾರು ತೆಗೆದವರನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಹೊರದಬ್ಬುತ್ತಾರೆ. ಆದರೆ, ನಾಮಪತ್ರ ಸಲ್ಲಿಸಲು ಬರುವ ರಾಜಕಾರಣಿಗಳನ್ನು ಮಾತ್ರ ಹಲ್ಲು ಕಿರಿದು ಸ್ವಾಗತಿಸುತ್ತಾರೆ. ಪೊಲೀಸರ ಈ ‘ಕರ್ತವ್ಯ ಪ್ರಜ್ಞೆ’ಯಿಂದ ನಾಗರಿಕರು ಹೈರಾಣಾಗಿದ್ದಾರೆ.