ಬೆಂಗಳೂರು: ಸಾಹಿತ್ಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಕನ್ನಡಿಗರನ್ನು ಗೌರವಿಸುವ ‘ಹೆಮ್ಮೆಯ ಕನ್ನಡಿಗ – 2018’ ಕಾರ್ಯಕ್ರಮವನ್ನು ‘ಜೀ ಕನ್ನಡ’ ವಾಹಿನಿಯು ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ಪ್ರಸಾರ ಮಾಡಲಿದೆ.
‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಪ್ರಸಿದ್ಧರಾದ ನಿರ್ದೇಶಕ ರಾಜ್ ಬಿ. ಶೆಟ್ಟಿ, ಕವಿ ನಿಸಾರ್ ಅಹಮದ್, ನಟ ಪುನೀತ್ ರಾಜ್ಕುಮಾರ್ ಸೇರಿ ವಿವಿಧ ಕ್ಷೇತ್ರದ 20 ಸಾಧಕರಿಗೆ ಗೌರವ ಸಮರ್ಪಿಸಲಾಗುವುದು.
‘ಸಾಧನೆ ತೋರಿದವರಿಗೆ ಗೌರವ ಸಮರ್ಪಿಸುವ ಕಾರ್ಯವನ್ನು ಮತ್ತೊಬ್ಬ ಸಾಧಕರಿಂದಲೇ ಮಾಡಿಸಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯ. ನಟ ರಮೇಶ್ ಅರವಿಂದ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ’ ಎಂದು ವಾಹಿನಿ ಹೇಳಿದೆ.
‘ತುಮಕೂರಿನ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರಿಗೆ ‘ಕನ್ನಡದ ಹೆಮ್ಮೆ’ ಗೌರವವನ್ನು ಮಠಕ್ಕೆ ತೆರಳಿ ಸಮರ್ಪಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.