ಋತುಮಾನಕ್ಕೆ ತಕ್ಕಂತೆ ಸಿಗುವ ಬಗೆ ಬಗೆಯ ಹಣ್ಣುಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ಬೇಕಾದಷ್ಟು ಒಳ್ಳೆಯ ಅಂಶಗಳನ್ನು ಹೊಂದಿರುತ್ತವೆ. ಅಲ್ಲದೇ ಆ ಕಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನು ದೂರವಿರಿಸುತ್ತವೆ.ಮಳೆಗಾಲದಲ್ಲಿ ಬಾಯಿಗೆ ಹಿತವಾಗುವ ಕರಿದ ಹಾಗೂ ಖಾರದ ತಿನಿಸುಗಳನ್ನು ತಿನ್ನಬೇಕು ಎನ್ನಿಸುವುದು ಸಾಮಾನ್ಯ. ಆದರೆ, ಅವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತೇ ಇದೆ. ಅದರಲ್ಲೂ ಕೊರೊನಾ ಸಮಯಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ ಮಳೆಗಾಲದಲ್ಲಿ ಸಿಗುವ ಹಣ್ಣುಗಳ ಸೇವನೆ ಉತ್ತಮ.
ಮಳೆಗಾಲದಲ್ಲಿ ಅಲರ್ಜಿ, ಸೋಂಕು, ದದ್ದು, ಜೀರ್ಣಕ್ರಿಯೆ ಸಮಸ್ಯೆ, ಮಲೇರಿಯಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದರೆ ಸರಿಯಾದ ಕ್ರಮದಲ್ಲಿ ಆಹಾರ ಸೇವಿಸುವುದು ತುಂಬಾ ಅಗತ್ಯ. ವಾತಾವರಣದಲ್ಲಿನ ತೇವಾಂಶವು ಜೀರ್ಣಕ್ರಿಯೆಯನ್ನು ನಿಧಾನ ಗೊಳಿಸಬಹುದು. ಅಲ್ಲದೇ ಜಠರದ ಸಮಸ್ಯೆಗಳಿಗೂ ಕಾರಣವಾಗಬಹುದು. ಈ ಕಾರಣಕ್ಕೆ ಈ ಋತುಮಾನದಲ್ಲಿ ಸಿಗುವ ಕೆಲವು ಹಣ್ಣುಗಳು ಚಯಾಪಚಯ ಕ್ರಿಯೆ ಹೆಚ್ಚಿಸಿ ಕೆಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎನ್ನುತ್ತಾರೆ ತಜ್ಞರು.
ಮಳೆಗಾಲದಲ್ಲಿ ಸಿಗುವ ಕೆಲವು ಹಣ್ಣುಗಳು ಹಾಗೂ ಅವುಗಳ ಉಪಯೋಗಗಳು ಇಲ್ಲಿವೆ.
ಲಿಚಿ: ಲಿಚಿ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಇದು ಆಸ್ತಮಾ ರೋಗಿಗಳು ಉಸಿರಾಟದ ಸಮಸ್ಯೆಯಿಂದ ಪಾರಾಗಲು ನೆರವಾಗುತ್ತದೆ. ಅಲ್ಲದೇ ದೇಹತೂಕವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಏಜಿಂಗ್ ಗುಣವೂ ಅಧಿಕವಾಗಿದೆ. ನಾರಿನಂಶ ಅಧಿಕವಾಗಿದ್ದು ಆಸ್ಯಿಡಿಟಿ ಹಾಗೂ ಅಜೀರ್ಣ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.
ಮರಸೇಬು: ಇದರಲ್ಲಿ ಪೋಷಕಾಂಶ ಜಾಸ್ತಿ ಇದ್ದು ಕಡಿಮೆ ಕ್ಯಾಲೊರಿ ಹೊಂದಿದೆ. ಜೊತೆಗೆ ವಿಟಮಿನ್ ಸಿ ಅಂಶ ಅಧಿಕವಿರುವ ಕಾರಣದಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಹಣ್ಣಿನಲ್ಲಿ ಶೇಕಡ 12ರಷ್ಟು ವಿಟಮಿನ್ ಸಿ ಅಂಶ ಇರುತ್ತದೆ. ನಾರಿನಂಶವೂ ಅಧಿಕವಾಗಿದೆ. ಡಯೆಟ್ ಪಾಲಿಸುವವರಿಗೂ ಮರಸೇಬು ಉತ್ತಮ.
ದಾಳಿಂಬೆ: ದಾಳಿಂಬೆ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ. ಅಲ್ಲದೇ ಮಳೆಗಾಲದಲ್ಲಿ ಕಾಡುವ ನೆಗಡಿ, ಪ್ಲೂನಂತಹ ಕಾಯಿಲೆಗಳಿಗೂ ಇದು ರಾಮಬಾಣ. ದಾಳಿಂಬೆ ರಸ ಸೇವಿಸುವುದರಿಂದ ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಹೆಚ್ಚುತ್ತದೆ. ಅಲ್ಲದೇ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸಂಧಿವಾತದ ಸಮಸ್ಯೆಯಿಂದ ಬಳಲುವವರಿಗೆ ಈ ಹಣ್ಣು ತುಂಬಾ ಸಹಕಾರಿ.
ಪಪ್ಪಾಯ: ಪಪ್ಪಾಯ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಇದರಲ್ಲಿರುವ ಅಧಿಕ ನಾರಿನಂಶವು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.
ವಿಟಮಿನ್ ಸಿ ಅಂಶ ಅಧಿಕವಿದ್ದು ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.