ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೇ ಬರುವ 'ಲಕ್ವ'

Last Updated 25 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಚಿಕ್ಕ ವಯಸ್ಸಿನವರೂ ಕೂಡ ಲಕ್ವ ಅಥವಾ ಪಾರ್ಶ್ವವಾಯು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ‘ಸೈಲೆಂಟ್‌ ಸ್ಟ್ರೋಕ್‌’ ಅಥವಾ ಸದ್ದಿಲ್ಲದ ಲಕ್ವಕ್ಕೆ ಹಲವರು ಒಳಗಾಗುತ್ತಿದ್ದು, ಇದಕ್ಕೆ ಕಾರಣಗಳೇನು? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬಹುದು ಎಂಬುದನ್ನು ವಿಶ್ವ ಪಾರ್ಶ್ವವಾಯು ಜಾಗೃತಿ ದಿನ (ಅ.29)ರಂದು ತಜ್ಞರು ವಿವರಿಸಿದ್ದಾರೆ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಪರಿಚಲನೆಗೆ ಅಡ್ಡಿಯಾಗುವುದು ಸೈಲೆಂಟ್ ಸ್ಟ್ರೋಕ್ ಅಥವಾ ಸದ್ದಿಲ್ಲದ ಪಾರ್ಶ್ವವಾಯುವಿಗೆ ಕಾರಣ. ಇದರಿಂದ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಪಾರ್ಶ್ವವಾಯು ಸಂಭವಿಸಬಹುದು. ಜೊತೆಗೆ ಇದರ ಸಾಧ್ಯತೆ ಮೂರು ಪಟ್ಟು ಅಧಿಕ ಎನ್ನಬಹುದು ಮತ್ತು ಮೆದುಳಿನಲ್ಲಿ ತೀವ್ರತರದ ಹಾನಿ ಉಂಟಾಗುವ ಸಾಧ್ಯತೆ ಕೂಡ ಜಾಸ್ತಿ. ಇದು ಲಕ್ವ ಹೊಡೆಯುವುದಕ್ಕಿಂತ ಮುನ್ನ ಮತ್ತು ಈ ಆಘಾತದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಸಾಮಾನ್ಯ. ಈ ಹಿಂದಿನ ಅಧ್ಯಯನಗಳ ಪ್ರಕಾರ ಪ್ರತಿ ಐವರು ಲಕ್ಷಣರಹಿತರಾದ ವ್ಯಕ್ತಿಗಳಲ್ಲಿ ಒಬ್ಬರಿಗೆ ಈ ‘ಸೈಲೆಂಟ್‌ ಬ್ರೇನ್‌ ಸ್ಟ್ರೋಕ್‌’ ಆಗಬಹುದು.

ಈ ಸೈಲೆಂಟ್ ಬ್ರೇನ್ ಇನ್ಫಾರ್ಕ್ಟ್ (ರಕ್ತದ ಚಲನೆ ಸಮರ್ಪಕವಾಗಿರದೆ ಆ ಭಾಗದಲ್ಲಿ ಯಾವುದೇ ಜೀವವಿರುವುದಿಲ್ಲ, ಅದು ಮರಗಟ್ಟಿರುತ್ತದೆ) ಅನ್ನು ತಡೆಗಟ್ಟಲು ಮತ್ತು ಅದನ್ನು ನಿರ್ವಹಣೆ ಮಾಡಲು ಕೆಲವು ಕ್ರಮಗಳಿವೆ. ಈ ಮರಗಟ್ಟುವಿಕೆ ಸಾಮಾನ್ಯವಾಗಿ ಮೆದುಳು ಆವರಿಸಿಕೊಂಡಿರುವ ಜಾಗವನ್ನು ಅವಲಂಬಿಸಿರುತ್ತದೆ. ಒಂದು ವೇಳೆ ಇದು ಪ್ರಮುಖ ಅಂಗಗಳು ಅಥವಾ ಜಾಗವನ್ನು ಒಳಗೊಳ್ಳದಿದ್ದರೆ ರೋಗಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರಮುಖ ಅಂಗಾಂಗಗಳಿರುವ ಜಾಗವು ಮರಗಟ್ಟಿದ್ದರೆ ಪಾರ್ಶ್ವವಾಯುವಿನ ಪ್ರಮಾಣ ಹೆಚ್ಚಾಗಿರುತ್ತದೆ. ಅಂತಹ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ.

ಎಂಆರ್‌ಐ ಮೂಲಕ ಪತ್ತೆ
ಈ ಸದ್ದಿಲ್ಲದ ಲಕ್ವವನ್ನು ಸಾಮಾನ್ಯವಾಗಿ ಮೆದುಳಿನ ಸಿ.ಟಿ. ಮತ್ತು ಎಂ.ಆರ್‌.ಐ. ಸ್ಕ್ಯಾನ್ ಮೂಲಕ ಪತ್ತೆ ಮಾಡಲಾಗುತ್ತದೆ. ಸಿಟಿ ಸ್ಕ್ಯಾನ್‌ಗಿಂತ ಎಂ.ಆರ್‌.ಐ. ಉತ್ತಮ. ಇದು ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳನ್ನೂ ಪತ್ತೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ವಿಧಾನ ಹಾಗೂ ಮೆದುಳಿನ ಕ್ಷೀಣತೆ ಮೊದಲಾದ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬಹುದು.

ಮೆದುಳಿನಲ್ಲಿ ಉಂಟಾಗುವ ಈ ಲಕ್ವ ವಯಸ್ಸು ಮತ್ತು ಇತರ ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಹಿಂದಿನ ಹಲವಾರು ಅಧ್ಯಯನಗಳ ಪ್ರಕಾರ ವಿವಿಧ ರೋಗಗಳಲ್ಲಿ ಈ ಲಕ್ವದ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ರಕ್ತನಾಳಕ್ಕೆ ರಕ್ತ ಪೂರೈಕೆ ಸಮಸ್ಯೆ ಹೊಂದಿರುವ ಶೇ 30ರಷ್ಟು ರೋಗಿಗಳು ಈ ಲಕ್ವದ ಸಮಸ್ಯೆಯಿಂದ ಬಳಲುತ್ತಾರೆ.

ಡೆಮೆನ್ಶಿಯ ಸಾಧ್ಯತೆ
ಇಲ್ಲಿ ಪ್ರಮುಖವಾದ ಆತಂಕವೆಂದರೆ ಪಾರ್ಶ್ವವಾಯು ಮರುಕಳಿಸಬಹುದು ಮತ್ತು ಸ್ಮರಣಶಕ್ತಿ ನಾಶವಾಗುವ ಡೆಮೆನ್ಶಿಯ ಕಾಣಿಸಿಕೊಳ್ಳಬಹುದು. ಈ ಹಿಂದಿನ ಹಲವಾರು ಅಧ್ಯಯನಗಳು ಮೆದುಳಿನಲ್ಲಿ ರಕ್ತ ಪರಿಚಲನೆಯಿಲ್ಲದೇ ಇರುವ ರೋಗಿಗಳ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗುತ್ತದೆ ಎಂಬುದನ್ನು ದೃಢಪಡಿಸಿವೆ. ಅಂದರೆ ಅವರಲ್ಲಿ ಗ್ರಹಣಶಕ್ತಿ, ನೆನಪಿನ ಶಕ್ತಿ ಗಣನೀಯವಾಗಿ ಕುಸಿಯುತ್ತದೆ.

ಈ ಸಮಸ್ಯೆ ಇರುವ ರೋಗಿಗಳಲ್ಲಿ ಯಾವುದೇ ಪ್ರಮುಖ ಲಕ್ಷಣ ಕಾಣಿಸಿಕೊಳ್ಳದಿರುವುದರಿಂದ ಪತ್ತೆ ಮಾಡುವುದು ಕಷ್ಟ. ಸಮಸ್ಯೆ ಅಂದರೆ ಮೆದುಳಿನಲ್ಲಿ ಮರಗಟ್ಟುವಿಕೆ ಜಾಸ್ತಿಯಾದಂತೆ ವ್ಯಕ್ತಿಯ ಗ್ರಹಣಶಕ್ತಿ, ನೆನಪಿನ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಅದನ್ನು ಪತ್ತೆ ಹಚ್ಚಿ ತಡೆಗಟ್ಟುವುದರಿಂದ ಈ ನೆನಪಿನ ಶಕ್ತಿ ಕಡಿಮೆಯಾಗುವುದನ್ನೂ ನಿಲ್ಲಿಸಬಹುದೇ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಕಾರಣದಿಂದಾಗಿ ಎಲ್ಲಾ ರೋಗಿಗಳಲ್ಲಿ ಸೈಲೆಂಟ್ ಸ್ಟ್ರೋಕ್‌ಗೆ ಮೆದುಳಿನ ಎಂ.ಆರ್‌.ಐ. ಮಾಡಿಸುವುದು ಕಡ್ಡಾಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ತಪಾಸಣೆ ಮಾಡುವಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಪ್ರಮುಖ ಕಾರಣವೆಂದರೆ ಇದಕ್ಕೆ ಸಮರ್ಪಕವಾದ ಚಿಕಿತ್ಸೆಯ ಕೊರತೆ. ಕೇವಲ ವಯಸ್ಕರಲ್ಲಿ ಮಾತ್ರವಲ್ಲದೇ, ಸಿಕಲ್ ಸೆಲ್ (ಅನುವಂಶಿಕ ಕಾಯಿಲೆ– ತೀವ್ರತರದ ರಕ್ತಹೀನತೆಯಿದ್ದು, ಜೀವಕೋಶಗಳು ಕುಡುಗೋಲಿನಾಕಾರದಲ್ಲಿರುತ್ತವೆ) ಕಾಯಿಲೆ ಇರುವ ಮಕ್ಕಳಲ್ಲಿ ಕೂಡ ಈ ಸದ್ದಿಲ್ಲದ ಲಕ್ವ ಸಂಭವಿಸುತ್ತಿದೆ.

ಧೂಮಪಾನ ನಿಲ್ಲಿಸಿ, ವ್ಯಾಯಾಮ ಮಾಡಿ
ಅನಿಯಮಿತವಾದ ಹೃದಯಬಡಿತ ಇರುವ 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಲ್ಲಿ ಸದ್ದಿಲ್ಲದ ಲಕ್ವದ ಅಪಾಯ ಹೆಚ್ಚು. ಅಂದರೆ ಉಳಿದವರಿಗಿಂತ ಎರಡು ಪಟ್ಟು ಅಧಿಕ. ಅಧಿಕ ರಕ್ತದೊತ್ತಡ, ಹೆಚ್ಚು ಕೊಬ್ಬು, ಮಧುಮೇಹ, ಧೂಮಪಾನ, ಅತಿಯಾದ ಮದ್ಯ ಸೇವನೆಯಂತಹ ಚಟಗಳು ಇದ್ದರೆ ಈ ಲಕ್ವದ ಅಪಾಯದ ಪ್ರಮಾಣ ಹೆಚ್ಚು. ಈ ಅಪಾಯವನ್ನು ಕಡಿಮೆ ಮಾಡಲು ಆ್ಯಂಟಿಪ್ಲೇಟ್‌ಲೆಟ್ ಔಷಧಿಗಳನ್ನು ತೆಗೆದುಕೊಳ್ಳಬೇಕು (ಉದಾಹರಣೆಗೆ ಆಸ್ಪರಿನ್ ಅಥವಾ ವೈದ್ಯರು ಸಲಹೆ ಮಾಡುವ ರಕ್ತ ತಿಳಿಗೊಳಿಸುವ ಔಷಧ). ತಂಬಾಕು ಸೇವನೆಯನ್ನು ನಿಲ್ಲಿಸಬೇಕು, ವ್ಯಾಯಾಮ ಆರಂಭಿಸಬೇಕು ಮತ್ತು ಆರೋಗ್ಯಕರವಾದ ತೂಕವನ್ನು ಹೊಂದುವತ್ತ ಗಮನಹರಿಸಬೇಕು.

(ಲೇಖಕರು ಸೀನಿಯರ್ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಮತ್ತು ಲಕ್ವ ತಜ್ಞರು, ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT