ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Doctors Day: ವೈದ್ಯರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್

Last Updated 1 ಜುಲೈ 2021, 7:47 IST
ಅಕ್ಷರ ಗಾತ್ರ

ಇಂದು ವೈದ್ಯರ ದಿನಾಚರಣೆ. ಕೋವಿಡ್ ಸಾಂಕ್ರಮಿಕ ರೋಗ ಇಡೀ ವಿಶ್ವವನ್ನೇ ವ್ಯಾಪಿಸಿ, ಎಲ್ಲರನ್ನೂ ಮನೆಯಲ್ಲೇ ಇದ್ದು, ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡಿದೆ. ಆದರೆ, ವೈದ್ಯ ಸಮುದಾಯ ಮಾತ್ರ ಮನೆಗೂ ತೆರಳದಂತೆ ಜನರ ಜೀವ ಕಾಪಾಡುವಲ್ಲಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಈ ಎರಡು ವರ್ಷದಲ್ಲಿ ವೈದ್ಯರ ನಿಸ್ವಾರ್ಥ ಸೇವೆಗೆ ಇಡೀ ವಿಶ್ವವೇ ತಲೆ ಬಾಗಿದೆ.

ಆದರೆ, ವೈದ್ಯರು ಸಹ ಮನುಷ್ಯರು. ಅವರಲ್ಲಿಯೂ ಭಾವನೆಗಳ ಏರಿಳಿತ, ಖುಷಿ-ದುಃಖ, ಬೇಸರ ಎಲ್ಲವೂ ಇದ್ದೇ ಇರುತ್ತದೆ. ಕೋವಿಡ್ಆರಂಭವಾದಾಗಿನಿಂದಲೂರಾತ್ರಿ, ಹಗಲು ಎನ್ನದೇ ದುಡಿಯುತ್ತಿರುವ ಅವರು, ಸಮಯಕ್ಕೆ ಸರಿಯಾಗಿ ಆಹಾರ ಸೇವೆನೆ ಇಲ್ಲದೇ, ಮಾನಸಿಕ ನೆಮ್ಮದಿ ಕಂಡುಕೊಳ್ಳದೇ ಸೇವೆ ಸಲ್ಲಿಸುತ್ತಿದ್ದಾರೆ.

ಇವರೂ ಸಹ ತಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿಮಿತ ಕಾಪಾಡಿಕೊಳ್ಳುವುದು ಅತಿ ಮುಖ್ಯ.ಹೀಗಾಗಿ ಇಡೀ ದಿನ ತಮ್ಮ ಮೂಡನ್ನು ಕ್ರಿಯಾಶೀಲವಾಗಿಟ್ಟುಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ವೈದ್ಯರಿಗೂ ಕೆಲವು ಸಲಹೆಗಳು ಇಲ್ಲಿವೆ.

ತಾಳ್ಮೆಯೇ ಮಂತ್ರ: ಪ್ರತಿ ರೋಗಿಗಳು ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಅವರ ಮನಸ್ಥಿತಿಗೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಇದರಿಂದ ವೈದ್ಯರ ತಾಳ್ಮೆ ಕೆಡಬಹುದು. ಹೀಗಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಸಂಭವಿಸುವ ಕೆಲ ಅಹಿತಕರ ಘಟನೆಗಳನ್ನು ನಿಭಾಹಿಸುವ ತಾಳ್ಮೆಯನ್ನು ವೈದ್ಯರು ಹೊಂದಿರಬೇಕು. ತಾಳ್ಮೆಯೊಂದಿದ್ದರೆ ರೋಗಿಯನ್ನು ಅಥವಾ ಅವರ ಕುಟುಂಬದವರನ್ನು ಮೃಧುವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದರೆ, ಪ್ರತಿ ಘಟನೆಗೂ ನಿಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗಬಹುದು.

ಕುಟುಂಬದೊಂದಿಗೆ ಸಮಯ ಕಳೆಯಿರಿ: ಪ್ರತಿಯೊಬ್ಬರ ಸಂತೋಷದ ಗುಟ್ಟೇ ಕುಟುಂಬ. ಕುಟುಂಬದೊಂದಿಗೆ ಸಮಯ ಕಳೆದರೆ ಎಂತಹ ಒತ್ತಡವಾದರೂ ಸರಿ ಕಡಿಮೆಯಾಗಿ ಬಿಡುತ್ತದೆ. ವೈದ್ಯ ವೃತ್ತಿಯಲ್ಲಿ ಒತ್ತಡವೂ ಸರ್ವೇ ಸಾಮಾನ್ಯ. ಅದರಿಂದ ಹೊರಬರಬೇಕೆಂದರೆ ನಿಮಗೆ ಸಮಯ ಸಿಕ್ಕಾಗಲೆಲ್ಲಾ ತಂದೆ-ತಾಯಿ, ಹೆಂಡತಿ, ಮಕ್ಕಳು ಇವರೊಂದಿಗೆ ಬೆರೆತು ಅವರ ಸಂತೋಷದಲ್ಲಿ ಭಾಗಿಯಾಗಿ. ಸಾಧ್ಯವಾದಷ್ಟು ಹೊರಗಡೆ ಪ್ರವಾಸ ಮಾಡಿ. ಇದು ಮನಸ್ಸನ್ನು ಹಗುರ ಮಾಡುವುದಲ್ಲದೇ, ನಾಳೆಯ ಕೆಲಸಕ್ಕೆ ಹೊಸ ಹುರುಪು ತುಂಬುತ್ತದೆ.

ಕೆಲಸ ಮತ್ತು ವೈಯಕ್ತಿಯ ಜೀವನವನ್ನು ಪ್ರತ್ಯೇಕವಾಗಿ ನೋಡಿ: ಕೆಲ ವೈದ್ಯರು ಕೆಲಸದ ಒತ್ತಡವನ್ನು ಕುಟುಂಬದ ಮೇಲೆ, ಕುಟುಂಬದಲ್ಲಿನ ಬೇಸರವನ್ನು ಕೆಲಸದ ಮೇಲೆ ಹಾಕುವುದನ್ನು ನೋಡಬಹುದು. ಇದು ಹೆಚ್ಚು ಅಪಾಯಕಾರಿ. ಕೆಲವೊಮ್ಮೆ ರೋಗಿಯ ಜೀವವನ್ನೇ ಕಸಿದುಕೊಳ್ಳಬಹುದು. ಅಥವಾ ಕೆಲಸದ ಒತ್ತಡವನ್ನು ಮನೆಯಲ್ಲಿ ತೋರಿದರೆ ಕುಟುಂಬದ ಕಲಹಕ್ಕೂ ಕಾರಣವಾಗಬಹುದು. ಹೀಗಾಗಿ ಈ ಎರಡನ್ನೂ ಒಂದಕ್ಕೊಂದು ಬೆರೆಸದೇ ಇರುವುದು ಒಳ್ಳೆಯದು. ಇದು ನಿಮ್ಮ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮವನ್ನು ತಡೆಯುತ್ತದೆ.

ಯೋಗ-ವ್ಯಾಯಾಮ, ಧ್ಯಾನ ರೂಢಿಸಿಕೊಳ್ಳಿ;ಇತರರ ಆರೋಗ್ಯ ನೋಡುವ ವೈದ್ಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಹಾಗೂ ಯೋಗ ಅತ್ಯಂತ ಪರಿಣಾಮಕಾರಿಯಾದರೆ, ಧ್ಯಾನ ಮಾನಸಿಕ ನೆಮ್ಮದಿಗೆ ಹೆಚ್ಚು ಸಹಾಯಕಾರಿ. ಪ್ರತಿ ದಿನ ಮುಂಜಾನೆ 1 ಗಂಟೆಗಳ ಕಾಲ ಇದಕ್ಕೆ ವಹಿಸಿದರೆ ಇಡೀ ದಿನ ನಮ್ಮ ಮನಸ್ಸನ್ನು ದಿನದ ಚಟುವಟಿಕೆಗಳಲ್ಲಾಗುವ ಏರಿಳಿತಳನ್ನ ಸಮನಾಗಿ ಸ್ವೀಕರಿಸಲು ಸಾಧ್ಯ.

ನಿಮ್ಮ ಸಂತೋಷದ ಮಾರ್ಗ ಕಂಡುಕೊಳ್ಳಿ: ಪ್ರತಿಯೊಬ್ಬರಿಗೂ ಖುಷಿ ಎಲ್ಲಿ ಸಿಗುತ್ತದೆ ಎಂದು ಅವರೇ ಕಂಡುಕೊಳ್ಳಬೇಕು. ಕೆಲವರಿಗೆ ಕುಟುಂಬದೊಂದಿಗೆ ಇದ್ದರೆ ಖುಷಿಯಾಗಬಹುದು, ಇನ್ನೂ ಕೆಲವರಿಗೆ ಲಾಂಗ್ ಡ್ರೈವ್, ಸಂಗೀತ ಕೇಳುವುದು, ಓದುವುದು ಹೀಗೆ ಯಾವುದೋ ಒಂದು ಅಭ್ಯಾಸದಲ್ಲಿ ಖುಷಿ ಸಿಗುತ್ತದೆ. ವೈದ್ಯರು ಸಹ ತಮ್ಮ ಖುಷಿ ಎಲ್ಲಿ ಸಿಗುತ್ತದೆ? ಎಂಬುದನ್ನು ಮೊದಲು ಕಂಡುಕೊಳ್ಳಿ.

ನಿಮ್ಮ ಬಗ್ಗೆ ಕಾಳಜಿ ವಹಿಸಿ: ವೈದ್ಯರಿಗೆ ಕೆಲಸದ ಸಮಯ ಎನ್ನುವುದಿಲ್ಲ. ಯಾವ ಸಮಯದಲ್ಲಿ ತುರ್ತು ಕೆಲಸ ಬರುತ್ತದೋ ಅವರಿಗೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯಬಾರದು. ಸೂಕ್ತ ನಿದ್ರೆ, ಪೌಷ್ಠಿಕ ಆಹಾರ ಸೇವನೆ ವ್ಯಾಯಾಮ ಇಂಥ ಒಳ್ಳೆಯ ಅಭ್ಯಾಸದಲ್ಲಿ ಕಾಂಪ್ರಮೈಸ್ ಆಗಬೇಡಿ.

ಕೃತಜ್ಞರಾಗಿರಿ: ವೈದ್ಯ ವೃತ್ತಿ ಇತರೆ ವೃತ್ತಿಗಳಿಗಿಂತ ಹೆಚ್ಚು ಭಿನ್ನ. ಪ್ರತಿ ರೋಗಿಗಳು ಗುಣಮುಖರಾದ ಬಳಿಕ ಅವರು ನಿಮಗೊಂದು ಕೃತಜ್ಞತೆ ಸಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಎಂಥವರಿಗೂ ಮನಸ್ಸು ಖುಷಿ ಪಡುತ್ತದೆ. ಅಂಥಹ ರೋಗಿಗಳ ಬಗ್ಗೆ ಹೆಚ್ಚು ಕೃತಜ್ಞರಾಗಿರಿ. ಜೊತೆಗೆ ನಿಮಗೆ ಸಹಾಯ ಮಾಡುವ ವರ್ಗದವರಿಗೂ ಸಹ ಕೃತಜ್ಞರಾಗಿರುವುದನ್ನು ಮರೆಯಬೇಡಿ.

(ಡಾ. ವೆಂಕಟೇಶ್ ಬಾಬು, ಮನೋವೈದ್ಯ, ಫೋರ್ಟಿಸ್ ಆಸ್ಪತ್ರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT