10ನೇ ವಯಸ್ಸಿನಲ್ಲಿ ನನ್ನಮೇಲೆ ಸಂಬಂಧಿಕರೊಬ್ಬರಿಂದಲೇ ಲೈಂಗಿಕ ದೌರ್ಜನ್ಯ ನಡೆದಿತ್ತು. ಏನೂ ಅರಿಯದ ವಯಸ್ಸಿನಲ್ಲಿ ನಡೆದ ದುಃಸ್ವಪ್ನವೊಂದು ನಿತ್ಯ ನನ್ನನ್ನು ಕಾಡುತ್ತಿದೆ. ಇದರಿಂದ ಹೊರಬರುವುದು ಹೇಗೆ ತಿಳಿಸಿ
ಹೆಸರು ಊರು ತಿಳಿಸಿಲ್ಲ.
ನಿಮಗಾಗಿದ್ದ ಆಘಾತಕ್ಕೆ ಸಾಂತ್ವನ ಹೇಳಲು ನನ್ನಲ್ಲಿ ಶಬ್ದಗಳಿಲ್ಲ. ಬಾಲ್ಯದಲ್ಲಿ ನಡೆಯುವ ಲೈಂಗಿಕ ಶೋಷಣೆಯಿಂದ ಮೂಡಿದ ನಿಮ್ಮ ನೋವು ಕೀಳರಿಮೆ ಪಾಪಪ್ರಜ್ಞೆ ಮುಂತಾದವುಗಳು ಬಹಳ ಆಳವಾಗಿ ಬೇರೂರಿರುತ್ತವೆ. ಹಾಗಾಗಿ ನಿರಂತರವಾಗಿ ಅವು ನಿಮಗೆ ಮಾನಸಿಕ ಹಿಂಸೆಯನ್ನು ನೀಡುತ್ತವೆ. ಬುದ್ಧಿ ವಿವೇಚನೆಗೆ ಬಳಸುವ ಮಿದುಳೇ ಬೆಳೆದಿಲ್ಲದಿರುವಾಗ ಆದ ಆಘಾತಗಳು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ನಿಮ್ಮ ದೇಹದ ಕಣಕಣಗಳಲ್ಲಿಯೂ ಸೇರಿಕೊಂಡಿರುತ್ತದೆ. ನಿಮ್ಮ ಈಗಿನ ವಯಸ್ಸು ಮದುವೆಯಾಗಿದೆಯೇ ಮುಂತಾದ ವಿವರಗಳನ್ನು ತಿಳಿಸಿದ್ದರೆ ಸಹಾಯವಾಗುತ್ತಿತ್ತು.
ನಿಮ್ಮ ಕಹಿ ಅನುಭವವನ್ನು ಇಲ್ಲಿಯವರೆಗೆ ನಿಮ್ಮ ಪೋಷಕರು ಮನೆಯವರು ಸ್ನೇಹಿತರು ಹೀಗೆ ಯಾರಲ್ಲಿಯಾದರೂ ಹಂಚಿಕೊಂಡಿದ್ದೀರಾ? ಹಂಚಿಕೊಳ್ಳದಿದ್ದರೆ ನಿಮ್ಮೊಳಗೆ ಮಡುವುಗಟ್ಟಿರುವ ನೋವು ಅಸಹ್ಯ ಕೋಪ ಕೀಳರಿಮೆ ಮುಂತಾದವುಗಳೆಲ್ಲಾ ಹೊರಹೋಗುವುದು ಹೇಗೆ ಸಾಧ್ಯ? ಒಬ್ಬ ಸುರಕ್ಷಿತ ವ್ಯಕ್ತಿಯೊಡನೆ ಯಾವುದೇ ಸಹಾಯದ ನಿರೀಕ್ಷೆಯಿಲ್ಲದೆ ಎಲ್ಲಾ ಕಹಿಯನ್ನೂ ಹಂಚಿಕೊಳ್ಳಬೇಕಾಗುತ್ತದೆ. ಆ ಸಮಯದಲ್ಲಿ ಮೂಡುವ ನಿಮ್ಮೆಲ್ಲಾ ನೋವು ದುಗುಡಗಳನ್ನು ಸಹಜವಾಗಿ ಹೊರಹೋಗಲು ಅವಕಾಶ ಕೊಡಬೇಕು. ಹೀಗೆ ನಿಮ್ಮ ದೇಹ ಮನಸ್ಸುಗಳನ್ನು ಹಂತಹಂತವಾಗಿ ಸ್ಥಿಮಿತಕ್ಕೆ ತರಬೇಕು. ಇವೆಲ್ಲವನ್ನು ಮಾಡಲು ಸಮಯದ ಅಗತ್ಯವಿದೆ. ಜೊತೆಗೆ ತಜ್ಞ ಮನೋಚಿಕಿತ್ಸಕರ ಸಹಾಯದ ಅಗತ್ಯವೂ ಇದೆ.
ದೌರ್ಜನ್ಯ ಮಾಡಿದ ವ್ಯಕ್ತಿ ಇನ್ನೂ ನಿಮ್ಮ ಸಂಪರ್ಕದಲ್ಲಿದ್ದರೆ ಒಮ್ಮೆ ನಿಮಗೆ ಆಗಿರುವ ಆಘಾತವನ್ನು ನೇರವಾಗಿ ತಿಳಿಸಿ ನಂತರ ಸಂಬಂಧವನ್ನು ಕಡಿದುಕೊಳ್ಳಿ. ನೀವು ಆಗಾಗ ನೆನಪಿಸಿಕೊಳ್ಳಬೇಕಾಗಿರುವುದು ನಿಮ್ಮ ಮೇಲೆ ಬಾಲ್ಯದಲ್ಲಿ ನಡೆದಿದ್ದು ಒಂದು ಅಪಘಾತ ಮತ್ತು ಒಪ್ಪಿಗೆಯಿಲ್ಲದೆ ನಿಮ್ಮ ಕೈಮೀರಿ ನಡೆದ ಕ್ರಿಮಿನಲ್ ಕೃತ್ಯ. ಇದಕ್ಕಾಗಿ ನೀವು ತಪ್ಪಿತಸ್ಥರಾಗುವುದು ಹೇಗೆ ಸಾಧ್ಯ? ಇಂತಹ ಹೇಯಕೃತ್ಯವನ್ನು ನೀವು ಅವಮಾನವಾಗಿ ಸ್ವೀಕರಿಸಿರುವದರಿಂದ ನಿಮ್ಮನ್ನೇ ದೋಷಿಯಾಗಿ ನೋಡಿಕೊಳ್ಳುವ ಸಾಧ್ಯತೆಗಳಿವೆ. ನೀವು ದೋಷಿಯಲ್ಲ ಅಸಹಾಯಕ ಬಲಿಪಶುವಾಗಿದ್ದಿರಿ. ಹಾಗಾಗಿ ನಿಮ್ಮ ಅಂತರಾತ್ಮದ ಪರಿಶುದ್ಧತೆಯನ್ನು ಯಾರೂ ಕಸಿದುಕೊಳ್ಳಲಾಗದು.
ಪುರುಷರಲ್ಲಿ ವೀರ್ಯ ಚಿಮ್ಮಿದಂತೆ ಮಹಿಳೆಯರಲ್ಲಿಯೂ ಅಂಡಾಣು ಚಿಮ್ಮುವುದೇ? ಸಾಮಾನ್ಯ ಜನರ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಿದ್ದೇನೆ. ದಯವಿಟ್ಟು ಉತ್ತರಿಸಿ.
ಹೆಸರು ಊರು ಬೇಡ.
ವಿಷಯಗಳನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕೆನ್ನುವ ನಿಮ್ಮ ಕುತೂಹಲ ಮೆಚ್ಚುವಂತಹದು. ಸಮಾಜದ ಎಲ್ಲರಿಗೂ ಪ್ರಮುಖವಾಗಿ ಮಕ್ಕಳಿಗೆ ಲೈಂಗಿಕತೆಯ ಕುರಿತಾದ ವೈಜ್ಞಾನಿಕ ಮಾಹಿತಿಗಳನ್ನು ತಿಳಿಸುವ ಶಿಕ್ಷಣಪದ್ದತಿಯನ್ನು ರೂಪಿಸದಿರುವುದು ನಮ್ಮ ರಾಜಕೀಯ ಸಾಮಾಜಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ದೋಷವಾಗಿದೆ. ಇದಕ್ಕಾಗಿ ಯುವಜನರುಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಕಾಗಿಲ್ಲ.
ಸ್ತ್ರೀಯರ ದೇಹದಲ್ಲಿ ಪ್ರತಿ ತಿಂಗಳು ಒಂದು ಅಂಡಾಣು ಉತ್ಪತ್ತಿಯಾಗುತ್ತದೆ. ಅದು ಗರ್ಭಾಶಯದ ಸುರಕ್ಷಿತ ವಾತಾವರಣದಲ್ಲಿ ಇರುತ್ತದೆ. ಪುರುಷರಲ್ಲಿ ಒಮ್ಮೆ ಸ್ಖಲನವಾಗುವ ವೀರ್ಯದಲ್ಲಿ ಕೋಟ್ಯಂತರ ವೀರ್ಯಾಣುಗಳಿರುತ್ತವೆ. ಸ್ತ್ರೀಯರ ಲೈಂಗಿಕ ಅಂಗಾಂಗಗಳು ದೇಹದ ಹೊರಭಾಗದಲ್ಲಿದ್ದರೂ ಗರ್ಭಾಶಯ ಒಳಗಡೆಯಿರುತ್ತದೆ. ವೀರ್ಯಾಣುಗಳನ್ನು ಅಲ್ಲಿಯವರೆಗೆ ತಲುಪಿಸುವು ಉದ್ದೇಶದಿಂದ ಪ್ರಕೃತಿ ಪುರುಷನ ಲೈಂಗಿಕ ಅಂಗಾಂಗಗಳಲ್ಲಿ ಚಿಮ್ಮಿಸುವ ವ್ಯವಸ್ಥೆ ರೂಪಿಸಿದೆ. ವಾತಾವರಣದ ಶಾಖವನ್ನು ಹೆಚ್ಚು ಕಾಲ ತಡೆದುಕೊಳ್ಳಲಾಗದೆ ಹೆಚ್ಚಿನ ವೀರ್ಯಾಣುಗಳು ನಿಷ್ಕ್ರಿಯವಾಗುತ್ತವೆ. ಕೇವಲ ಒಂದು ವೀರ್ಯಾಣು ಕೊನೆಗೆ ಅಂಡಾಣುವಿನೊಡನೆ ಸೇರುವುದರಲ್ಲಿ ಸಫಲವಾದಾಗ ಗರ್ಭಕಟ್ಟುತ್ತದೆ. ಸ್ತ್ರೀಯರ ಅಂಡಾಣು ಗರ್ಭಾಶಯದಲ್ಲಿಯೇ ಇರುವುದರಿಂದ ಚಿಮ್ಮುವ ಅಗತ್ಯವಿರುವುದಿಲ್ಲ. ಲೈಂಗಿಕ ಆಸಕ್ತಿ ಮೂಡಿದಾಗ ಘರ್ಷಣೆಗೆ ಅನುಕೂಲವಾಗುವಂತೆ ಜಾರುಕಗಳು (ಲ್ಯೂಬ್ರಿಕೆಂಟ್ಸ್) ಮಾತ್ರ ಸ್ತ್ರೀಯರ ಲೈಂಗಿಕ ಅಂಗಾಗಳಿಂದ ಸ್ರವಿಸಲ್ಪಡುತ್ತದೆ.
ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್ ಉತ್ತರಿಸಲಿದ್ದಾರೆ. bhoomika@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.