ಬಾಲ್ಯದಿಂದಲೂ ಯೋಗಕ್ಕೆ ಮಹತ್ವದ ಕೊಡಬೇಕು. ರಾಗ ದ್ವೇಷಗಳಿಂದ ಮುಕ್ತರಾಗಲು, ದೇಹ–ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದಕ್ಕೆ ಯೋಗ ಅತ್ಯುತ್ತಮ ಸಾಧನ. ದೇಹವನ್ನು ಹೆಚ್ಚು ಬಾಗಿಸುವುದೇ ಯೋಗವಲ್ಲ ಎಂದು ಹೇಳುತ್ತಾರೆ ಬೆಂಗಳೂರಿನ ಯೋಗ ಗುರು ಡಾ.ಎಸ್.ಎನ್. ಓಂಕಾರ್.
2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿರುವಓಂಕಾರ್ ಅವರು, ಭಾರತ ಕ್ರಿಕೆಟ್ ತಂಡಕ್ಕೂ ಯೋಗ ಹೇಳಿಕೊಟ್ಟವರು. ಬನಶಂಕರಿ ಎರಡನೇ ಹಂತದಲ್ಲಿ ‘ಯೋಗ ಮಂದಿರ’ ನಡೆಸುತ್ತಿರುವ ಅವರು ಯೋಗಕ್ಕೆ ಸಂಬಂಧಿಸಿ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಮಹಿಳೆಯರಿಗೆ ಉಪಯುಕ್ತವಾಗುವ ಆಸನ, ಸೂರ್ಯನಮಸ್ಕಾರ ಮೊದಲಾದ ವಿಷಯಗಳಿಗೆ ಸಂಬಂಧಿಸಿ ‘ಡಿವಿಡಿ’ಗಳನ್ನೂ ಹೊರತಂದಿದ್ದಾರೆ. ಅವರು ಇಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
ನಿಮ್ಮ ಪ್ರಕಾರ ಯೋಗವು ದೈಹಿಕ ಕ್ಷಮತೆ ಕಾಪಾಡಲು ಹೇಗೆ ಅನುಕೂಲವಾಗಲಿದೆ?
ದೇಹವನ್ನುಕಟುಮಸ್ತಾಗಿ ಇಟ್ಟುಕೊಳ್ಳುವುದೇ ಫಿಟ್ನೆಸ್. ದೇಹ ಮತ್ತು ಮನಸ್ಸನ್ನು ಸ್ವಸ್ಥವಾಗಿಡಲು ಯೋಗ ಖಂಡಿತ ಸಹಾಯ ಮಾಡುತ್ತದೆ. ಆಸನ ಮತ್ತು ಪ್ರಾಣಾಯಾಮ ಯೋಗದಲ್ಲಿ ಪ್ರಮುಖ. ಸೂರ್ಯನಮಸ್ಕಾರ ಇತ್ಯಾದಿ ನಿಂತು ಮಾಡುವ ಆಸನಗಳು, ಮರೀಚಾಸನ , ಶೀರ್ಷಾಸನ, ಸರ್ವಾಂಗಾಸನ ಮಾಡುವುದರಿಂದ ಸ್ನಾಯು ವ್ಯವಸ್ಥೆ ಹಾಗೂ ಅಸ್ಥಿ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಸೂಕ್ತ ಉಸಿರಾಟ ಕ್ರಿಯೆಗೂ ಯೋಗ ತುಂಬಾ ಸಹಾಯಕ.
ಕ್ರೀಡಾ ತಂಡಗಳಿಗೆಯೋಗ ಗುರುವಾಗಿ ಮಾರ್ಗದರ್ಶನ ನೀಡಿದ್ದೀರಿ. ಅದರ ಬಗ್ಗೆ ವಿವರಿಸಿ
ಭಾರತ ಕ್ರಿಕೆಟ್ ತಂಡಕ್ಕೆ ಸುಮಾರು 15 ಶಿಬಿರಗಳನ್ನು ನಡೆಸಿದ್ದೇನೆ. ಇದು ಅಧಿಕೃತ. ಆದರೆ ಅದಕ್ಕೂ ಮುನ್ನ ಅಜಿತ್ ವಾಡೇಕರ್ ಹಾಗೂ ಕಪಿಲ್ ದೇವ್ ಅವರು ತಂಡದ ಕೋಚ್ ಆಗಿದ್ದಾಗ ತರಬೇತಿ ನೀಡುತ್ತಿದ್ದೆ. ಜಾನ್ ರೈಟ್ ಕೋಚ್ ಆಗಿದ್ದಾಗ ಇದಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು. ಅವರು ಸಾಕಷ್ಟು ಪ್ರೋತ್ಸಾಹ ನೀಡಿದರು ಕೂಡ. ಪ್ರತಿದಿನ ಒಂದು ಗಂಟೆ ಯೋಗಕ್ಕೇ ಮೀಸಲಿಟ್ಟರು. ಸಾಕಷ್ಟು ವರ್ಷ ಇದು ನಡೆದುಕೊಂಡು ಬಂತು. ನಂತರ ಬಂದ ಗ್ರೆಗ್ ಚಾಪೆಲ್ ಕೂಡ ಮುಂದುವರಿಸಿದರು. ಆ ಬಳಿಕ ಯಾವುದೊ ಕಾರಣಕ್ಕೆ ನಿಂತು ಹೋಯಿತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೂ ಹೋಗಿ ತರಗತಿ ತೆಗೆದುಕೊಳ್ಳುತ್ತಿದ್ದೆ. ಅವರಿಗೆ ಆಸಕ್ತಿ ಇದ್ದರೆ ಮತ್ತೆ ಮಾರ್ಗದರ್ಶನ ನೀಡಲು ಸಿದ್ಧ.
ನಿಮ್ಮ ಪ್ರಕಾರ ಜನಸಾಮಾನ್ಯರು ಮಾಡಬಹುದಾದ ಸೂರ್ಯ ನಮಸ್ಕಾರದಂತಹ ಸುಲಭ ಆಸನಗಳು ಯಾವುವು?
ಸೂರ್ಯ ನಮಸ್ಕಾರ ಸುಲಭ ಎಂದು ಪರಿಗಣಿಸಲಾಗುವುದಿಲ್ಲ. ಇದು 10-12 ಆಸನಗಳ ಒಂದು ಸಂಕಲನ. ಸೂರ್ಯನಮಸ್ಕಾರದಲ್ಲಿ ಹಲವು ವೈವಿಧ್ಯಗಳಿವೆ. ವ್ಯಕ್ತಿಯ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ 20 ರೀತಿಯ ಆಸನಗಳನ್ನು ಮಾಡಬಹುದು. ಇದಕ್ಕೆ ಉಸಿರಾಟದ ಕ್ರಮ ಚೆನ್ನಾಗಿರಬೇಕು. ದೇಹ ಮತ್ತು ಮನಸ್ಸು ಏಕತ್ರವಾಗಿರಬೇಕು. ಇನ್ನೇನನ್ನೂ ಕಲಿಯುವುದು ಕಷ್ಟ ಎನ್ನುವವರು ಸೂರ್ಯನಮಸ್ಕಾರ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ದೇಹ, ವಯಸ್ಸು, ಮನಸ್ಸು ಇವುಗಳನ್ನು ಪರಿಗಣನೆಯಲ್ಲಿಟ್ಟುಕೊಂಡು ಆಸನಗಳನ್ನು ಮಾಡಬೇಕು. ಶರೀರವನ್ನು ಹೆಚ್ಚು ಬಗ್ಗಿಸುವುದೇ ಉತ್ತಮ ಯೋಗವಲ್ಲ. ಆ ಭಾವನೆ ತಪ್ಪು. ಆಂತರಿಕವಾಗಿ ಎಷ್ಟು ನೆಮ್ಮದಿಯಾಗಿದ್ದೇವೆ ಎಂಬುದು ಮುಖ್ಯ.
ಈಗಿನ ಒತ್ತಡದ ಜೀವನಕ್ಕೆ ಯೋಗ ಮದ್ದು ಎಂಬ ಮಾತಿದೆ. ಅದನ್ನು ಹೇಗೆ ವಿಶ್ಲೇಷಿಸುವಿರಿ?
ಆಧುನಿಕ ಜೀವನದಲ್ಲಿ ಒತ್ತಡ ಇದೆ ಎಂಬ ಕಲ್ಪನೆಯೇ ತಪ್ಪು. ಜೀವನವನ್ನು ನೋಡುವ ರೀತಿ ಸರಿಯಿಲ್ಲದಿದ್ದಾಗ ಒತ್ತಡ ಎಂಬ ಭಾವ ಮೊಳೆಯುತ್ತದೆ. ನಾವು ಜೀವನವನ್ನು ನೋಡುವ ರೀತಿಯನ್ನು ಯೋಗ ಬದಲಿಸುತ್ತದೆ. ಮೊದಲುನಾವು ಬದಲಾಗಬೇಕು. ಮಾನಸಿಕ ತೃಪ್ತಿ ಜೀವನದ ಬಹುಮುಖ್ಯ ಸಂಗತಿ.ಝೀರೊ ಫಿಗರ್ ಒಂದು ಅಪಕ್ವ ಪರಿಕಲ್ಪನೆ. ಆಸನ, ಪ್ರಾಣಾಯಾಮಗಳೇ ಪ್ರಮುಖವಾದವು. ಅಗತ್ಯಕ್ಕಿಂತ ಹೆಚ್ಚು ಆಸ್ತಿ, ಅಂತಸ್ತು ವೃದ್ಧಿಸುವ ಕಡೆ ಗಮನಕೊಡುವುದೂ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಒಳ್ಳೆಯ ಪುಸ್ತಕಗಳನ್ನು ಓದುವುದರಿಂದಲೂ ಮಾನಸಿಕ ನೆಮ್ಮದಿ ಪಡೆಯಬಹುದು.
ಮಾನಸಿಕ ಆರೋಗ್ಯಕ್ಕೆ ಯೋಗ ಹೇಗೆ ಅನುಕೂಲ?
ಮನಸ್ಸಿನ ಆಲೋಚನೆ, ಭಾವನೆಗಳ ಮೇಲೆ ಹತೋಟಿ ಸಾಧಿಸಬೇಕು. ಮನಸ್ಸು ಎಲ್ಲೆಲ್ಲೊ ಹರಿಯಲುಬಿಡಬಾರದು. ‘ಯೋಗವು ಚಿತ್ತವೃತ್ತಿ ನಿರೋಧ’ ಎಂಬುದು ಪತಂಜಲಿ ಮಹರ್ಷಿಯ ನುಡಿ. ಯೋಗಶಾಸ್ತ್ರ ಇರುವುದೇ ಮನಸ್ಸನ್ನು ಉನ್ನತ ಸ್ಥಿತಿಗೆ ತಂದುಕೊಳ್ಳುವುದಕ್ಕೆ. ವ್ಯಕ್ತಿಯ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ, ಸಮಾಜವೂ ಉತ್ತಮವಾಗಿರ ಬಲ್ಲದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.