ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಬೆಚ್ಚಗಿರುವುದೇ ಮದ್ದು: ವೈದ್ಯರ ಸಲಹೆ

ಆರೋಗ್ಯಕ್ಕಾಗಿ ಮುಂಜಾಗೃತಾ ಕ್ರಮ
Last Updated 22 ಡಿಸೆಂಬರ್ 2021, 3:12 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿದೆ. ಬಿಸಿಲನಾಡು ಎಂದೇ ಹೆಸರಾದ ಪ್ರದೇಶದ ಜನರಿಗೆ ಇದರಿಂದ ಸಹಜ ಕಾಯಿಲೆಗಳು ಆರಂಭವಾಗಿವೆ. ಅದರಲ್ಲೂ ಶ್ವಾಸಕೋಶ ಸಂಬಂಧಿ ಹಾಗೂ ಸಂದಿವಾತ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಶೀತಗಾಳಿಯಲ್ಲೂ ಸಂದಿವಾತದಿಂದ ಪಾರಾಗುವುದು ಹೇಗೆ ಎಂಬ ಕುರಿತು ಸಂದಿವಾತ ತಜ್ಞ ಡಾ.ಸಚಿನ್‌ ಆರ್‌. ಜೀವಣಗಿ ಹಾಗೂ ಮನೆಯಲ್ಲೇ ವಹಿಸಬೇಕಾದ ಮುಂಜಾಗೃತಾ ಕ್ರಮಗಳೇನು ಎಂಬ ಬಗ್ಗೆ ಆಯುರ್ವೇದ ವೈದ್ಯೆ ಡಾ.ಶ್ವೇತಾ ಸಾವಳಗಿ ಕೆಲವು ಸಲಹೆ ನೀಡಿದ್ದಾರೆ.

ಸಂದಿವಾತ ಸಮಸ್ಯೆ: ‘ಚಳಿಗಾಲದಲ್ಲೇ ಸಂದಿವಾತ ಕಾಣಿಸಿಕೊಳ್ಳುತ್ತದೆ ಎಂದೇನೂ ಇಲ್ಲ. ಆದರೆ, ಈ ಕಾಯಿಲೆ ಇದ್ದವರು ಚಳಿಯ ಕಾರಣ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಹೀಗಾಗಿ, ಚಳಿಗಾಲದಲ್ಲೇ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಸಂದಿವಾತದಲ್ಲಿ ನೂರಕ್ಕೂ ಹೆಚ್ಚು ವಿಧದ ಕಾಯಿಲೆಗಳಿವೆ. ಸಾಮಾನ್ಯವಾಗಿ ಈ ಭಾಗದಲ್ಲಿ ಕಂಡುಬರುವುದು ‘ರುಮಟೈಸ್‌ ಅರ್ಥರೈಟಿಸ್‌’ ಮಾತ್ರ. ಕೆಲವು ಮುಂಜಾಗೃತಾ ಕ್ರಮ ವಹಿಸಿದರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು’ ಎನ್ನುವುದು ಡಾ.ಸಚಿನ ಅವರ ಸಲಹೆ.

‘ಸಂದಿವಾತ ಸಮಸ್ಯೆ ಇದ್ದವರು ಶೀತಗಾಳಿ ಅಥವಾ ಮಳೆಯಲ್ಲಿ ಓಡಾಡಬಾರದು. ಮನೆಯಲ್ಲಿದ್ದಾಗಲೂ ದೇಹವನ್ನು ಆದಷ್ಟು ಬೆಚ್ಚಗೆ ಇಟ್ಟುಕೊಳ್ಳಿ. ವಾತಾವರಣದಲ್ಲಿ ಶೀತಗಾಳಿ ಹೆಚ್ಚಾದಂತೆ ದೇಹದಲ್ಲಿನ ತೇವಾಂಶ ಕಡಿಮೆಯಾಗುತ್ತದೆ. ಅದನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಪದೇಪದೇ ನೀರು ಕುಡಿಯಿರಿ. ಬಿಸಿನೀರು, ಬಿಸಿಯಾದ ಊಟ ಸೇವಿಸುವುದು ಬಹಳ ಮುಖ್ಯ. ಹೊರಗೆ ಬರುವುದು ಅನಿವಾರ್ಯವಾದಾಗ ಬೆಚ್ಚಗಿನ ಬಟ್ಟೆ, ಕೈಗವಸು, ಕಾಲುಚೀಲಗಳನ್ನು ಧರಿಸಿಕೊಳ್ಳುವುದು ಸೂಕ್ತ’ ಎಂದೂ ಅವರು ಹೇಳಿದ್ದಾರೆ.

‘ತಂಪುಪಾನೀಯ ಕುಡಿಯುವುದು, ಐಸ್‌ಕ್ರೀಂ, ಜಂಕ್‌ಫುಡ್‌, ಫಾಸ್ಟ್‌ಫುಡ್‌ಗಳನ್ನ ಸೇವಿಸುವುದು, ಧೂಮಪಾನ, ತಂಬಾಕು ತಿನ್ನುವುದು ಕೂಡ ಕಷ್ಟ ತಂದೊಡ್ಡುತ್ತದೆ. ಮೇಲಾಗಿ, ರೋಗ ನಿರೋಧಶಕ್ತಿ ಕಡಿಮೆ ಇದ್ದವರು ಎ.ಸಿ.ಗಳಲ್ಲಿ ಕುಳಿತುಕೊಳ್ಳುವುದನ್ನೂ ಕಡಿಮೆ ಮಾಡಬೇಕು’ ಎಂಬುದು ಈ ತಜ್ಞರ ಸಲಹೆ.

‘4ರಿಂದ 50 ವರ್ಷದವರಲ್ಲೂ ಸಂದಿವಾತ ಕಂಡುಬರುತ್ತಿದೆ. ಮಾತ್ರೆ ನುಂಗುವಷ್ಟೇ ಬೆಚ್ಚಗಿರುವುದು ಮಹತ್ವದ್ದು’ ಎನ್ನುತ್ತಾರೆ.

ಆಯುರ್ವೇದ ಆರೋಗ್ಯದ ಗುಟ್ಟು

lಕಿವಿಗಳು ಕೇಳಿಸುವ ಜತೆಗೆ ದೇಹದ ಸಮತೋಲನ ಕ್ರಿಯೆಗೂ ಸಹಕರಿಸುತ್ತವೆ. ಹಾಗಾಗಿ, ಚಳಿಗಾಲದಲ್ಲಿ ಕಿವಿಗಳ ಸಂರಕ್ಷಣೆಗೆ ಗಮನ ಕೊಡಿ

l ಶೀತಗಾಳಿ ಇದ್ದಾಗ ಹೊರಹೋಗುವವರು ಕಿವಿಗಳಲ್ಲಿ ಅರಳಿ ಹಾಕಿಕೊಳ್ಳಿ

lಶೀತ, ಕೆಮ್ಮು, ಕಫ ಆದವರು ಮಾಸ್ಕ್‌ ಧರಿಸುವುದು ಅಥವಾ ಕೆಮ್ಮುವಾಗ ಕರವಸ್ತ್ರದಿಂದ ಮುಚ್ಚಿಕೊಳ್ಳುವುದು ಅಗತ್ಯ

lಹೆಚ್ಚು ನೀರು ಸೇವಿಸುವ ಮೂಲಕ ದೇಹದ ತೇವಾಂಶ ಕಾಪಾಡಿಕೊಳ್ಳಿ

lತುಪ್ಪ, ಶುದ್ಧ ಅಡುಗೆ ಎಣ್ಣೆಯಂಥ ಜಿಗುಟು ಪದಾರ್ಥ ಹಾಗೂ ಮೃದು ಆಹಾರಗಳಿಂದಲೂ ದೇಹದ ಸಮತೋಲನ ಕಾಪಾಡಿಕೊಳ್ಳಬಹುದು

l ಮಕ್ಕಳು, ಹಿರಿಯರು, ಬಾಣಂತಿಯರು ಉದ್ದ ತೋಳಿನ ಉಲನ್‌ ಬಟ್ಟೆ ಧರಿಸುವುದು ಮುಖ್ಯ. ಕಿವಿ– ನೆತ್ತಿಗೆ ಶೀತಗಾಳಿ ಬಡಿಯದಂತೆ ಕುಲಾಯಿ ಹಾಕಿಕೊಳ್ಳಿ

l ಉಗುರುಬೆಚ್ಚಗಿನ ನೀರಿನಿಂದ ಎಣ್ಣೆಮಜ್ಜನ ಮಾಡುವುದು, ಬಿಸಿ ಕಷಾಯ ಕುಡಿಯುವುದು, ಪ್ರಾಣಾಯಾಮ ರೂಢಿ ಇಟ್ಟುಕೊಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT