ಅಮರಾವತಿ (ಪಿಟಿಐ): ಅಸ್ತಿತ್ವದಲ್ಲಿರುವ 13 ಜಿಲ್ಲೆಗಳಲ್ಲಿ 26 ಜಿಲ್ಲೆಗಳನ್ನು ರೂಪಿಸಿ ಆಂಧ್ರಪ್ರದೇಶ ಸರ್ಕಾರವು ಗೆಜೆಟ್ ಅಧಿಸೂಚನೆಯೊಂದನ್ನು ಹೊರಡಿಸಿದೆ.
ನೂತನ 13 ಜಿಲ್ಲೆಗಳು ಸೋಮವಾರದಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಶನಿವಾರ ರಾತ್ರಿ ಹೊರಡಿಸಿದ ಗೆಜೆಟ್ ಅಧಿಸೂಚನೆ ತಿಳಿಸಿದೆ.
ಅಧಿಸೂಚನೆಯನ್ನು ಹೊರಡಿಸಿದ ಕೂಡಲೇ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೂತನ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನೇಮಕ ಮಾಡಿದೆ.
ಹೊಸ ಜಿಲ್ಲೆಗಳನ್ನು ರಚಿಸುವ ಸಂಬಂಧ ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರವು ಕರಡು ಅಧಿಸೂಚನೆಯೊಂದನ್ನು ಹೊರಡಿಸಿ ಸಲಹೆಗಳನ್ನು ಆಹ್ವಾನಿಸಿತ್ತು.
ರಾಜ್ಯವು ಹೊಂದಿರುವ 25 ಲೋಕಸಭಾ ಕ್ಷೇತ್ರಗಳನ್ನೂ ಜಿಲ್ಲೆಗಳಾಗಿ ರೂಪಿಸಲಾಗಿದೆ. ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿನ ಬುಡಕಟ್ಟು ಪ್ರದೇಶಗಳನ್ನು ಪ್ರತ್ಯೇಕಿಸಿ 26ನೇ ಜಿಲ್ಲೆಯನ್ನು ರೂಪಿಸಲಾಗಿದೆ.
ಹೊಸ ಜಿಲ್ಲೆಗಳ ಪೈಕಿ, ಎನ್ಟಿಆರ್ (ವಿಜಯವಾಡ), ಅಲ್ಲೂರಿ ಸೀತಾರಾಮ ರಾಜು (ಪಡೇರು), ಶ್ರೀ ಸತ್ಯಸಾಯಿ (ಪುಟ್ಟಪರ್ತಿ) ಅನ್ನಮಯ್ಯ (ರಾಯಚೋಟಿ) ಮತ್ತು ಶ್ರೀ ಬಾಲಾಜಿ (ತಿರುಪತಿ) ಕೂಡ ಸೇರಿವೆ.ನಾಳೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಈ ಜಿಲ್ಲೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.