ತಿರುವನಂತಪುರ/ಪಟನಮ್ತಿಟ್ಟ/ಜೈಪುರ: ಕೇರಳದಲ್ಲಿ ವರ್ಷಧಾರೆ ಮುಂದುವರಿದಿದ್ದು, ಕಾರೊಂದು ನಿಯಂತ್ರಣ ತಪ್ಪಿ ಹೊಳೆಯಲ್ಲಿ ಬಿದ್ದಿದ್ದರಿಂದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
‘ಪಟನಮ್ತಿಟ್ಟ ಜಿಲ್ಲೆಯ ವೆನ್ನಿಕುಳಂ ಬಳಿ ಬಸ್ವೊಂದನ್ನು ಹಿಂದಿಕ್ಕಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿದಕಾರು ಉಕ್ಕಿ ಹರಿಯುತ್ತಿದ್ದ ಹೊಳೆಗೆ ಉರುಳಿದೆ. ಚಾಂಡಿ ಮ್ಯಾಥ್ಯೂ, ಅವರ ಪತ್ನಿ ಹಾಗೂ ಮಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸೋಮವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಅತಿಕ್ಕಯಂ ಗ್ರಾಮದ 60 ವರ್ಷದ ವ್ಯಕ್ತಿಯೊಬ್ಬರು ಪಂಪಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಿರುವನಂತಪುರ, ಕೊಲ್ಲಂ, ಪಟನಮ್ತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸೋಮವಾರ ರೆಡ್ ಅಲರ್ಟ್ ಘೋಷಿಸಲಾಗಿತ್ತು.
ರಾಜಸ್ಥಾನದಲ್ಲಿ ಜುಲೈ ತಿಂಗಳಲ್ಲಿ ಒಟ್ಟು 270 ಮಿ.ಮೀ.ಮಳೆಯಾಗಿದೆ. ಸುಮಾರು ಏಳು ದಶಕಗಳಲ್ಲಿ ಜುಲೈನಲ್ಲಿ ದಾಖಲಾದ ಗರಿಷ್ಠ ಮಳೆ ಇದಾಗಿದೆ.