ಲಖಿಂಪುರ ಖೇರಿ (ಉತ್ತರ ಪ್ರದೇಶ): ಲಖಿಂಪುರ ಖೇರಿಯಲ್ಲಿ ಅ.3ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಇದೀಗ 13ಕ್ಕೆ ಏರಿದಂತಾಗಿದೆ. ಬಂಧಿತರಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಸಹ ಸೇರಿದ್ದಾರೆ.
ಬಂಧಿತರನ್ನು ಸಿಂಗಾಹಿ ಪಟ್ಟಣದ ಮೋಹಿತ್ ತ್ರಿವೇದಿ, ಬರ್ಸೊಲಾ ಕಲಾನ್ನ ರಂಕು ರಾಣಾ ಮತ್ತು ಟಿಕೊನಿಯಾ ಕೊಟ್ಮಾಲಿ ಠಾಣಾ ವ್ಯಾಪ್ತಿಯಲ್ಲಿರುವ ಚಿಮ್ಮ ತಾಂಡದ ಧರ್ಮೇಂದ್ರ ಎಂದು ಗುರುತಿಸಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಇತರ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಈ ಮೂವರ ಹೆಸರನ್ನು ಹೇಳಿದ್ದರು. ಅದನ್ನು ಆಧರಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.