ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಜ್‌ಗಾರ್‌ ಮೇಳ: 71 ಸಾವಿರ ಉದ್ಯೋಗ ನೇಮಕಾತಿ ಆದೇಶ ವಿತರಿಸಿದ ಮೋದಿ  

Last Updated 20 ಜನವರಿ 2023, 15:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೋಜ್‌ಗಾರ್‌ ಮೇಳದ ಭಾಗವಾಗಿ ವಿವಿಧ ಇಲಾಖೆಗಳ 71,426 ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವರ್ಚುವಲ್‌ ಮೂಲಕ ನೇಮಕಾತಿ ಆದೇಶಗಳನ್ನು ವಿತರಣೆ ಮಾಡಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಭಾರತವು ಬದಲಾವಣೆಗೆ ಸಾಕ್ಷಿಯಾಗಿದೆ. ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶದಲ್ಲಿ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ನಿರಂತರವಾಗಿ ಸೃಷ್ಟಿಸಲಾಗುತ್ತಿದೆ. ದೇಶವು ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾದಾಗ, ಸ್ವ-ಉದ್ಯೋಗದ ಅಸಂಖ್ಯಾತ ಅವಕಾಶಗಳು ಸೃಷ್ಟಿಯಾಗುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಕೈಗೊಂಡ ಮೂಲಸೌಕರ್ಯಗಳ ವ್ಯಾಪಕ ಅಭಿವೃದ್ಧಿಯು ಸ್ವಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ತೆರೆದಿಟ್ಟಿದೆ. ಇದಕ್ಕೆ ದೇಶವು ಇಂದು ಸಾಕ್ಷಿಯಾಗಿದೆ’ ಎಂದು ಹೇಳಿದರು.

‘ರೋಜ್‌ಗಾರ್‌ ಮೇಳ’ವು ನಮ್ಮ ಸರ್ಕಾರದ ಹೆಗ್ಗುರುತಾಗಿ ಮಾರ್ಪಟ್ಟಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಮತ್ತಷ್ಟು ವೇಗ ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರವು ಹಲವು ಬದಲಾವಣೆಗಳನ್ನು ಮಾಡಿದೆ’ ಎಂದು ಅವರು ಹೇಳಿದರು.

ನೇಮಕಾತಿ ಆದೇಶ ಪಡೆದವರಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಿರಿಯ ಎಂಜಿನಿಯರ್‌ಗಳು, ಲೋಕೊ ಪೈಲಟ್‌ಗಳು, ತಂತ್ರಜ್ಞರು, ಇನ್ಸ್‌ಪೆಕ್ಟರ್, ಉಪ ತನಿಖಾಧಿಕಾರಿಗಳು, ಕಾನ್ಸ್‌ಟೆಬಲ್, ಸ್ಟೆನೊಗ್ರಾಫರ್, ಕಿರಿಯ ಲೆಕ್ಕಾಧಿಕಾರಿಗಳು, ಗ್ರಾಮೀಣ ಅಂಚೆ ಸಿಬ್ಬಂದಿ, ಆದಾಯ ತೆರಿಗೆ ತನಿಖಾಧಿಕಾರಿಗಳು, ಶಿಕ್ಷಕರು, ನರ್ಸ್‌ಗಳು, ವೈದ್ಯರು, ಸಾಮಾಜಿಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದವರು ಇದ್ದರು.

ಪ್ರಧಾನಿ ಅವರು ಈ ಯೋಜನೆಯಡಿ ಈವರೆಗೆ 2.17 ಲಕ್ಷಕ್ಕೂ ಹೆಚ್ಚು ಜನರಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದ್ದಾರೆ. 2023ರ ಡಿಸೆಂಬರ್‌ ಒಳಗೆ ತ್ವರಿತವಾಗಿ 10 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಮೋದಿ ಅವರು ಕಳೆದ ಜೂನ್‌ನಲ್ಲಿ ಆದೇಶಿಸಿದ್ದರು.

79 ಸಾವಿರ ಉದ್ಯೋಗ ತುಂಬಾ ಕಡಿಮೆ: ಕಾಂಗ್ರೆಸ್‌

‘ಸರ್ಕಾರದಲ್ಲಿ ಈಗಲೂ 30 ಲಕ್ಷ ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ಯುವ ಜನರಿಗೆ ಪ್ರಧಾನಿಯವರು ಬರೀ 71 ಸಾವಿರ ನೇಮಕಾತಿ ಪತ್ರಗಳನ್ನು ವಿತರಿಸಿರುವುದು ಕಡಿಮೆಯಲ್ಲವೇ. ನಿಮ್ಮ ಭರವಸೆ ಪ್ರಕಾರ ಎಂಟು ವರ್ಷಗಳಲ್ಲಿ 16 ಕೋಟಿ ಜನರಿಗೆ ಉದ್ಯೋಗ ನೀಡಬೇಕಾಗಿತ್ತು. ಯಾಕೆ ನೀಡಲಿಲ್ಲ ಎಂಬುದನ್ನು ತಿಳಿಸಬಹುದೇ’ ಎಂದು ಕಾಂಗ್ರೆಸ್ ಪಕ್ಷ ಮೋದಿ ಅವರನ್ನು ಪ್ರಶ್ನಿಸಿದೆ.

‘ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ನೀವು ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ನೀಡುವ ಭರವಸೆಯನ್ನು ನೀಡಿದ್ದೀರಿ. ಕಳೆದ ಎಂಟು ವರ್ಷಗಳಲ್ಲಿ ಕೊಡಬೇಕಿದ್ದ ಆ ಉದ್ಯೋಗಗಳು ಎಲ್ಲಿವೆ ಎನ್ನುವುದನ್ನು ಯುವ ಜನರಿಗೆ ತಿಳಿಸಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT