ನವದೆಹಲಿ: ಚಂಡೀಗಡದ ಕಂಪನಿಯೊಂದರ ಮೇಲೆ ನಕಲಿ ದಾಳಿ ನಡೆಸಿ ಹಣ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಸಿಬಿಐನ ನಾಲ್ವರು ಸಬ್ ಇನ್ಸ್ಪೆಕ್ಟರ್ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐನ ದೆಹಲಿ ಘಟಕದಲ್ಲಿರುವ ಸುಮಿತ್ ಗುಪ್ತಾ, ಪ್ರದೀಪ್ ರಾಣಾ, ಅಂಕುರ್ ಕುಮಾರ್ ಮತ್ತು ಆಕಾಶ್ ಅಹ್ಲಾವತ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವಸಿಬಿಐ ವಕ್ತಾರ ಆರ್.ಸಿ ಜೋಶಿ, ‘ಮುಜುಗರದ ಪ್ರಸಂಗವನ್ನುಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಗಮನಕ್ಕೆ ತಂದ ಬಳಿಕ ನಾಲ್ವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ’ ಎಂದು ಹೇಳಿದರು.
ವಜಾಗೊಂಡಿರುವ ನಾಲ್ವರು ಸೇರಿದಂತೆ ಆರು ಮಂದಿ ಮೇ 10ರಂದು ತಮ್ಮ ಕಚೇರಿಗೆ ನುಗ್ಗಿ ಭಯೋತ್ಪಾದಕರಿಗೆ ಬೆಂಬಲ ಮತ್ತು ಹಣ ನೀಡಿದ್ದಕ್ಕಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಂಡೀಗಡ ಮೂಲದ ಉದ್ಯಮಿಯೊಬ್ಬರು ಸಿಬಿಐಗೆ ದೂರು ನೀಡಿದ ನಂತರ ಘಟನೆ ಬಯಲಿಗೆ ಬಂದಿತ್ತು. ಆರೋಪಿಗಳು ದೂರುದಾರರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.