ಶಿಲ್ಲಾಂಗ್: ಮೇಘಾಲಯದ ವೆಸ್ಟ್ಜೈಂತಿಯಾ ಹಿಲ್ಸ್ ಜಿಲ್ಲೆಯ ಮಿಹ್ಮಿಂತ್ಡು ಹಳ್ಳಿಯಲ್ಲಿ ಆಳವಾದ ಬಾವಿ ತೋಡುತ್ತಿದ್ದ ವೇಳೆ ಉಸಿರುಗಟ್ಟಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಜೊವೈ ಪಟ್ಟಣದ ಹೊರವಲಯದಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಅಸ್ವಸ್ಥಗೊಂಡ ಇಬ್ಬರನ್ನು ರಕ್ಷಿಸಲಾಗಿದೆ.
‘35 ಮೀಟರ್ ಆಳದ ಬಾವಿ ತೋಡಿ ಅದನ್ನು ಸಜ್ಜುಗೊಳಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ನೀರು ಸೆಳೆಯಲು ಬಳಸಿದ ಪಂಪ್ನಿಂದ ಬಿಡುಗಡೆಯಾದ ಹೊಗೆಯಿಂದ ಉಸಿರುಗಟ್ಟಿ ಈ ಕಾರ್ಮಿಕರು ಪ್ರಜ್ಞೆ ಕಳೆದುಕೊಂಡಿರುವ ಸಾಧ್ಯತೆ ಇದೆ’ ಎಂದು ಅಗ್ನಿಶಾಮಕ ವಿಭಾಗದ ಅಧೀಕ್ಷಕ ಎ.ಗೋಯೆಂಕಾ ಹೇಳಿದ್ದಾರೆ.