ಲಖನೌ (ಪಿಟಐ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಮತದಾನ ಗುರುವಾರ ನಡೆಯಲಿದೆ. 10 ಜಿಲ್ಲೆಗಳ 57 ಕ್ಷೇತ್ರಗಳಲ್ಲಿ 676 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ಮತ್ತು ಎಸ್ಪಿ ಅಭ್ಯರ್ಥಿ ಸ್ವಾಮಿ ಪ್ರಸಾದ್ ಮೌರ್ಯ ಸೇರಿ ಹಲವರ ಭವಿಷ್ಯ ನಿರ್ಧಾರವಾಗಲಿದೆ.
ಅಂಬೇಡ್ಕರ್ ನಗರ, ಬಲರಾಮ್ಪುರ, ಸಿದ್ಧಾರ್ಥ್ನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್ಗಂಜ್, ಗೋರಖಪುರ, ಕುಶೀನಗರ, ದೇವರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.
57 ಕ್ಷೇತ್ರಗಳಲ್ಲಿ 11 ಮೀಸಲು ಕ್ಷೇತ್ರಗಳಿವೆ. ಇಲ್ಲಿ ಬಿಜೆಪಿಗೆ ಕಠಿಣ ಸ್ಪರ್ಧೆ ಇದೆ ಎನ್ನಲಾಗಿದೆ. ಸುಮಾರು 2.14 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಗೋರಖ್ಪುರ ನಗರ ಕ್ಷೇತ್ರದಲ್ಲಿ ಯೋಗಿ ಆದಿತ್ಯನಾಥ ಅವರ ಎದುರು ಸಮಾಜವಾದಿ ಪಕ್ಷದಿಂದ, ಬಿಜೆಪಿಯ ಮಾಜಿ ನಾಯಕ ಉಪೇಂದ್ರ ದತ್ತ ಶುಕ್ಲಾ ಅವರ ಪತ್ನಿ ಸ್ಪರ್ಧಿಸಿದ್ದಾರೆ. ಆಜಾದ್ ಸಮಾಜ್ ಪಕ್ಷದ ಸ್ಥಾಪಕ ಚಂದ್ರಶೇಖರ್ ಆಜಾದ್ ಕೂಡಾ ಕಣದಲ್ಲಿದ್ದಾರೆ.