ನವದೆಹಲಿ: ಪೆಗಾಸಸ್ ಗೂಢಚಾರಿಕೆ ಹಾಗೂ ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿ, ವಿರೋಧ ಪಕ್ಷಗಳ ಸಂಸದರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
‘ಗೂಢಚಾರಿಕೆ ಹಾಗೂ ಕೇಂದ್ರದ ಮೂರು ಕೃಷಿ ಕಾಯ್ದೆಗಳು ದೇಶಕ್ಕೆ ಆತಂಕಕಾರಿಯಾಗಿವೆ. ಕೃಷಿ ಭೂಮಿ ಯನ್ನು ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಇಡುವ ಈ ಕಾಯ್ದೆಗಳಿಂದ ರೈತರಬದುಕು ಮೂರಾಬಟ್ಟೆಯಾಗುತ್ತದೆ. ಕಾಯ್ದೆ ವಿರೋಧಿಸಿ, ದೆಹಲಿಯ ಗಡಿಯಲ್ಲಿ ಕಳೆದ ಏಳು ತಿಂಗಳಿನಿಂದ ನಡೆದಿರುವ ರೈತ ಹೋರಾಟದಲ್ಲಿ 550ಕ್ಕೂ ಹೆಚ್ಚು ಕೃಷಿಕರು ಜೀವತೆತ್ತಿದ್ದು ಮನು ಕುಲದ ದೊಡ್ಡ ದುರಂತ. ಪೆಗಾಸಸ್ ತಂತ್ರಾಂಶ ಬಳಸಿ, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರ ಫೋನ್ಗಳ ಕದ್ದಾಲಿಕೆಯಾಗಿರುವ ಬೆಳವಣಿಗೆಯಿಂದ ನಾಗರಿಕ ಸಮಾಜ ಆಘಾತಗೊಂಡಿದೆ’ ಎಂದು ಸಂಸದರು ಹೇಳಿದ್ದಾರೆ.
ಮಾರಕವಾದ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಲು ಒಲ್ಲದ ಹಾಗೂ ಗೂಢಚಾರಿಕೆ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗದಿರುವ ಈ ವಿದ್ಯಮಾನದ ವಿಚಾರವಾಗಿ ತಮ್ಮ ಭೇಟಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅಕಾಲಿದಳ, ಎನ್ಸಿಪಿ, ಬಿಎಸ್ಪಿ, ಸಿಪಿಐ, ಸಿಪಿಎಂ, ಆರ್ಎಲ್ಪಿ ಹಾಗೂ ಕಾಂಗ್ರೆಸ್ ಪಕ್ಷದ 10 ಸಂಸದರು ಪತ್ರಕ್ಕೆ ಸಹಿ ಮಾಡಿದ್ದಾರೆ.