ನವದೆಹಲಿ: ಶ್ರದ್ಧಾ ವಾಲಕರ್ ಹತ್ಯೆ ಬಳಿಕ ಶವವನ್ನು ಕತ್ತರಿಸಿ, ಮೃತದೇಹದ ಭಾಗಗಳನ್ನು ಹಲವೆಡೆ ಎಸೆದಿರುವ ಹಿನ್ನೆಲೆಯಲ್ಲಿ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾನನ್ನುಶನಿವಾರ ದಕ್ಷಿಣ ದೆಹಲಿಯ ವಿವಿಧ ಪ್ರದೇಶಗಳಿಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಈವರೆಗೆ ಮೃತದೇಹದ 13 ತುಂಡುಗಳು ಅಥವಾ ಮೂಳೆಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಗುರುಗ್ರಾಮದಲ್ಲಿ ಕೆಲ ಭಾಗಗಳು ಪತ್ತೆಯಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಶ್ರದ್ಧಾಳ ತಲೆ ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
‘ಪೂನಾವಾಲಾ ಮನೆಯಲ್ಲಿದ್ದ ಹರಿತವಾದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದಲೇ ಮೃತದೇಹವನ್ನು 35 ಭಾಗಗಳಾಗಿ ಕತ್ತರಿಸಲಾಗಿತ್ತೇ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಹಾಗೆಯೇ ಕಳೇಬರದ ಭಾಗಗಳು ಶ್ರದ್ಧಾಳದ್ದೇ ಎಂಬುದನ್ನು ಪತ್ತೆ ಹಚ್ಚಲು ಆಕೆಯ ತಂದೆ ಮತ್ತು ಸಹೋದರನ ರಕ್ತದ ಮಾದರಿಯನ್ನು ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಅಫ್ತಾಬ್ ತನ್ನ ಸಹಜೀವನ ಸಂಗಾತಿ ಶ್ರದ್ಧಾಳನ್ನು ಭೀಕರ ಹತ್ಯೆ ಮಾಡಿ, ಶವವನ್ನು 35 ತುಂಡುಗಳಾಗಿ ಕತ್ತರಿಸಿ ಹಲವು ದಿನಗಳ ಕಾಲ ದೆಹಲಿಯ ವಿವಿಧೆಡೆ ಎಸೆದಿದ್ದ.