ಪಣಜಿ: ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ 80 ಮೀಸಲಾತಿ, ಕೌಶಲ ಹೊಂದಿದ ಯುವಕರಿಗೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆಹಲವು ಭರವಸೆಗಳನ್ನು ಆಮ್ ಆದ್ಮಿ ಪಕ್ಷ (ಎಎಪಿ) ಈಡೇರಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೋವಾದಲ್ಲಿ ಖಾಸಗಿ ಉದ್ಯೋಗಗಳು ಗೋವಾದವರಿಗೆ ಮೀಸಲಾಗಿಲ್ಲ. ನಾವು ಅಧಿಕಾರಕ್ಕೆ ಬಂದರೆ ಶೇ 80ರಷ್ಟು ಉದ್ಯೋಗಗಳನ್ನು ಗೋವಾದ ಯುವಜನರಿಗೆ ಮೀಸಲಿಡುತ್ತೇವೆ’ ಎಂದು ಹೇಳಿದರು.
‘ನಾವು ಗೋವಾದ ಪ್ರತಿ ಮನೆಯಲ್ಲೂ ಒಬ್ಬ ನಿರುದ್ಯೋಗಿ ಯುವಕನಿಗೆ ಉದ್ಯೋಗ ನೀಡುತ್ತೇವೆ. ಯುವಕರಿಗೆ ಉದ್ಯೋಗ ಸಿಗುವವರೆಗೆ, ತಿಂಗಳಿಗೆ ₹3,000 ನಿರುದ್ಯೋಗ ಭತ್ಯೆ ಕೊಡುತ್ತೇವೆ’ ಎಂದು ಕೇಜ್ರಿವಾಲ್ ಹೇಳಿದರು.
‘ಕೊರೊನಾದಿಂದಾಗಿ, ಪ್ರವಾಸೋದ್ಯಮ ವಲಯವು ನಷ್ಟದಲ್ಲಿದೆ. ಪ್ರವಾಸೋದ್ಯಮ ಅವಲಂಬಿತ ಕುಟುಂಬಗಳಿಗೆ ಉದ್ಯೋಗ ಮರುಸ್ಥಾಪಿಸುವವರೆಗೆ ತಿಂಗಳಿಗೆ ₹5,000 ಪರಿಹಾರ ನೀಡಲಾಗುವುದು. ಹಾಗೆಯೇ ಗಣಿಗಾರಿಕೆ ಅವಲಂಬಿತ ಕುಟುಂಬಗಳಿಗೂ ಗಣಿ ಆರಂಭವಾಗುವವರೆಗೂ ತಿಂಗಳಿಗೆ ₹ 5,000 ನೀಡಲಾಗುವುದು’ ಎಂದು ಅವರು ಹೇಳಿದರು.
ಗೋವಾದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸಮ್ಮಿಶ್ರ ಸರ್ಕಾರವು, ಎಎಪಿಯ ದೆಹಲಿ ಸರ್ಕಾರದ ನೀತಿಗಳನ್ನು ನಕಲು ಮಾಡಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಟೀಕಿಸಿದರು.
‘ನಾಲ್ಕು ವರ್ಷಗಳ ಹಿಂದೆಯೇ ನಾವು ದೆಹಲಿಯಲ್ಲಿ ನೀರನ್ನು ನಾವು ಉಚಿತವಾಗಿ ಕೊಡಲು ಆರಂಭಿಸಿದೆವು. ಮೂರು ವರ್ಷಗಳ ಹಿಂದೆ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಶುರು ಮಾಡಿದೆವು. ದೆಹಲಿಯಲ್ಲಿ ನಾವು ಏನು ಮಾಡುತ್ತೇವೋ ಅವುಗಳನ್ನು ಸಾವಂತ್ ಇಲ್ಲಿ ಈಗ ನಕಲು ಮಾಡಲು ಶುರು ಮಾಡಿದ್ದಾರೆ. ನಿಮಗೆ ಒರಿಜಿನಲ್ (ಮೂಲ) ಲಭ್ಯವಿರುವಾಗ ಡೂಪ್ಲಿಕೇಟ್ (ನಕಲು) ಯಾಕೆ ಬೇಕು?’ ಎಂದು ಮತದಾರರನ್ನು ಪ್ರಶ್ನಿಸಿರುವ ಕೇಜ್ರಿವಾಲ್, ಎಎಪಿಗೆ ಮತ ನೀಡುವಂತೆ ಗೋವಾ ಮತದಾರರಿಗೆ ಮನವಿ ಮಾಡಿದ್ದಾರೆ.