ನವದೆಹಲಿ: ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತದೆ ಎಂದು ಪಕ್ಷ ಸೋಮವಾರ ತಿಳಿಸಿದೆ.
ಸಿಎಜಿ ವರದಿಯ ಪ್ರಕಾರ ಉತ್ತರಾಖಂಡವು ಹಿಮಾಲಯದ ರಾಜ್ಯಗಳ ಪೈಕಿ ಅತ್ಯಂತ ಕೆಟ್ಟ ಆರೋಗ್ಯ ಸೇವೆಗಳನ್ನು ಹೊಂದಿದೆ ಎಂದು ಪಕ್ಷ ಹೇಳಿಕೊಂಡಿದೆ.
ಒಂದು ವೇಳೆ ಉತ್ತರಾಖಂಡದಲ್ಲಿ ಆಮ್ ಆದ್ಮಿ ಸರ್ಕಾರ ಅಧಿಕಾರಕ್ಕೆ ಬಂದರೆ, ದೆಹಲಿಯಂತೆ ಉತ್ತರಾಖಂಡದ ಜನರಿಗೆ ಉತ್ತಮ ಗುಣಮಟ್ಟದ ಮತ್ತು ಉಚಿತ ಆರೋಗ್ಯ ಸೇವೆಗಳು ಲಭ್ಯವಾಗುತ್ತವೆ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಉತ್ತರಾಖಂಡದಲ್ಲಿ ಆರೋಗ್ಯ ಸೇವೆಗಳ ಸ್ಥಿತಿ ತುಂಬಾ ಕೆಟ್ಟದಾಗಿದ್ದು, ರೋಗಿಗಳು ಆಸ್ಪತ್ರೆ ತಲುಪುವ ಮೊದಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2018-19ರಲ್ಲಿ 188 ಕೋಟಿ ರೂ. ಇದ್ದ ಉತ್ತರಾಖಂಡದ ಆರೋಗ್ಯ ಬಜೆಟ್ ಅನ್ನು 2019-20ರಲ್ಲಿ ಕೇವಲ 97 ಕೋಟಿಗೆ ಇಳಿಸಲಾಗಿದೆ. ಒಂದು ವರ್ಷದಲ್ಲಿ ಆರೋಗ್ಯಕ್ಕಾಗಿ ಒಬ್ಬ ವ್ಯಕ್ತಿಗೆ 5.25 ಪೈಸೆ ಮಾತ್ರ ಖರ್ಚು ಮಾಡಲಾಗುತ್ತಿದೆ' ಎಂದು ಭಾರದ್ವಾಜ್ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್ನ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಇಂಗಿತವನ್ನು ಎಎಪಿ ಘೋಷಿಸಿದೆ.