ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದ ಎದುರು ಧರಣಿ ನಡೆಸಲು ಎಎಪಿ ನಿರ್ಧಾರ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ₹2,400 ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸಗಳ ಎದುರು ಧರಣಿ ನಡೆಸುವುದಾಗಿ ಆಮ್ ಆದ್ಮಿ ಪಕ್ಷ ಶನಿವಾರ ತಿಳಿಸಿದೆ.
ಈ ವಿಚಾರವಾಗಿ ಮಾಧ್ಯಮ ಗೋಷ್ಠಿ ನಡೆಸಿರುವ ಎಎಪಿ ನಾಯಕಿ ಅತಿಶಿ, 'ದೆಹಲಿ ಮಹಾನಗರ ಪಾಲಿಕೆಯಲ್ಲಿ ₹2,400 ಕೋಟಿಗೂ ಅಧಿಕ ಹಣ ದುರಪಯೋಗವಾಗಿದೆ. ಕೇಂದ್ರ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಅಲ್ಲಿಯವರೆಗೂ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸಗಳ ಎದುರು ಎಎಪಿ ಧರಣಿ ನಡೆಸಲಿದೆ' ಎಂದು ತಿಳಿಸಿದ್ದಾರೆ.
'₹2,400 ಕೋಟಿಗೂ ಅಧಿಕ ಬಾಡಿಗೆಯನ್ನು ದೆಹಲಿ ಮಹಾನಗರ ಪಾಲಿಕೆ ಮನ್ನಾ ಮಾಡಿದೆ. ಇದರಿಂದಾಗಿ ಸಾರ್ವಜನಿಕ ಬೊಕ್ಕಸಕ್ಕೆ ನಷ್ಟವಾಗಿದೆ. ಈ ಭ್ರಷ್ಟಾಚಾರಕ್ಕೆ ಯಾರು ಹೊಣೆ?' ಎಂದು ಎಎಪಿ ನಾಯಕಿ ಪ್ರಶ್ನಿಸಿದ್ದಾರೆ.
'ಭಾನುವಾರ ಬೆಳಿಗ್ಗೆ 11 ಗಂಟೆಗೆ ಅಮಿತ್ ಶಾ ಮತ್ತು ಅನಿಲ್ ಬೈಜಾಲ್ ಅವರನ್ನು ನಾವು ಭೇಟಿ ಮಾಡಲಿದ್ದೇವೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವವರೆಗೂ ನಾವು ಅಲ್ಲಿಯೇ ಕುಳಿತುಕೊಳ್ಳಲಿದ್ದೇವೆ' ಎಂದು ಅತಿಶಿ ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ಪುರಸಭೆ ನಿಗಮಗಳ ನಾಯಕರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಹೊರಗೆ ನಡೆಸುತ್ತಿರುವ ಧರಣಿ ಕುಳಿತಿರುವ ಸಮಯದಲ್ಲೇ ಎಎಪಿ ಈ ನಿರ್ಧಾರ ಕೈಗೊಂಡಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.