ನವದೆಹಲಿ: ಪ್ರತಿಭಟನಾ ನಿರತ ರೈತ ಸಂಘಟನೆಗಳ ಎಲ್ಲ ಬೇಡಿಕೆಗಳನ್ನು ಸ್ವೀಕರಿಸಿ, ಮೂರು ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಇಂದು (ಸೋಮವಾರ) ರೈತ ಸಂಘಟನೆಗಳೊಂದಿಗೆ ಮಾತುಕತೆ ಆರಂಭವಾಗುವ ಮುನ್ನ ಟ್ವೀಟ್ ಮಾಡಿರುವ ಕೇಜ್ರಿವಾಲ್, ಮಳೆ ಮತ್ತು ತೀವ್ರ ಚಳಿಯಲ್ಲೂ ಪ್ರತಿಭಟನೆ ಮುಂದವರಿಸಿರುವ ರೈತರ ಸಂಕಲ್ಪನವನ್ನು ಶ್ಲಾಘಿಸಿದ್ದಾರೆ.
’ಮಳೆ ಮತ್ತು ತೀವ್ರ ಶೀತದ ನಡುವೆಯೂ ರಸ್ತೆಗಳಲ್ಲಿ ದೃಢವಾಗಿ ಉಳಿದುಕೊಂಡಿರುವ ರೈತರ ಸಂಕಲ್ಪಕ್ಕೆ ನಮಸ್ಕಾರ ಎಂದ ಹೇಳಿರುವ ಅವರು, ’ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿ ಮತ್ತು ಇಂದಿನ ಸಭೆಯಲ್ಲಿ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ’ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಗಡಿಭಾಗಗಳಲ್ಲಿ ಚಳಿ ತೀವ್ರವಾಗಿದ್ದು, ತಾಪಮಾನ ಮೈನಸ್ ಡಿಗ್ರಿಗೆ ಇಳಿಯುತ್ತಿದೆ. ಇಂಥ ತೀವ್ರ ಚಳಿಯ ಜತೆಗೆ, ಭಾನುವಾರ ಮಳೆ ಕೂಡ ಸುರಿದಿದೆ. ಹವಾಮಾನ ವ್ಯತ್ಯಾಸವಾದರೂ ಬೇಡಿಕೆ ಈಡೇರುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತರು ಪಟ್ಟು ಹಿಡಿದಿದ್ದಾರೆ.