ಕೋಲ್ಕತ್ತ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತಮ್ಮ ಮನೆಗೆ ಭೇಟಿ ನೀಡಿ ತೆರಳಿದ ಮರುದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗಿನ ನಿಕಟ ಒಡನಾಟದ ಬಗ್ಗೆ ಮಾತನಾಡಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ‘ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನನಗೆ ತುಂಬಾ ಆತ್ಮೀಯರು. ಈ ಸಂಸ್ಥೆಗೆ ಸಹಾಯ ಮಾಡಲು ನಾನು ಅವರನ್ನು ಸಂಪರ್ಕಿಸಿದ್ದೆ’ ಎಂದು ಹೇಳಿದ್ದಾರೆ.
ಸಚಿವ ಮತ್ತು ನಗರದ ಮೇಯರ್ ಫಿರ್ಹಾದ್ ಹಕೀಂ ಅವರನ್ನೂ ಹೊಗಳಿದ ಗಂಗೂಲಿ, ‘ಫಿರ್ಹಾದ್ ಅವರು ದಿನದ ಯಾವುದೇ ಸಮಯದಲ್ಲಿ ಯಾರು ಬೇಕಾದರೂ ಸಂಪರ್ಕಿಸಬಹುದಾದ ವ್ಯಕ್ತಿ. ಎಲ್ಲರಿಗೂ ಅವರಿಂದ ಸಹಾಯ ಸಿಗುತ್ತದೆ’ ಎಂದು ಬಣ್ಣಿಸಿದ್ದಾರೆ.
ಅಮಿತ್ ಶಾ ಅವರು ಗಂಗೂಲಿ ಅವರ ಮನೆಗೆ ಭೇಟಿ ನೀಡಿರುವುದು, ಗಂಗೂಲಿ ಅವರು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿತ್ತು.