ಚೆನ್ನೈ: ಬೆಂಗಳೂರಿನಿಂದ ತಮಿಳುನಾಡಿಗೆ ಫೆಬ್ರುವರಿ 8ರಂದು ವಿ.ಕೆ. ಶಶಿಕಲಾ ಆಗಮಿಸುವ ದಿನ ಅವರ ಗುಂಪು ಹಿಂಸಾಚಾರ ನಡೆಸಲು ಸಂಚು ರೂಪಿಸಿದೆ ಎಂದು ಎಐಎಡಿಎಂಕೆ ಆರೋಪಿಸಿದೆ.
ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮಗಳನ್ನುಕೈಗೊಳ್ಳುವಂತೆ ಪೊಲೀಸರಿಗೆ ಕೋರಲಾಗಿದೆ.
ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿರುವ ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖ್ಯಸ್ಥ ಮತ್ತು ಶಶಿಕಲಾ ಅವರ ಸಂಬಂಧಿ ಟಿ.ಟಿ.ವಿ ದಿನಕರನ್, ಎಐಎಡಿಎಂಕೆಯ ಕೆಲವು ಮುಖಂಡರು ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸಭೆ:ಶಶಿಕಲಾ ಅವರು ತಮಿಳುನಾಡಿಗೆ ಹಿಂತಿರುಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ. ಪನ್ನೀರಸೇಲ್ವಂ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ಎಐಎಡಿಎಂಕೆ ಮುಖಂಡರು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.
‘ಶಶಿಕಲಾ ಅವರನ್ನು ಎಐಎಡಿಎಂಕೆ ಮುಖಂಡರು ಅಥವಾ ಕಾರ್ಯಕರ್ತರು ಭೇಟಿಯಾದರೆ ಅಂತವರನ್ನು ಪಕ್ಷದಿಂದ ವಜಾಗೊಳಿಸಲಾಗುವುದು’ ಎಂದು ವಕ್ತಾರ ವೈಗೈಚೆಲ್ವನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.