ಚೆನ್ನೈ (ಪಿಟಿಐ): ‘ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ತಮ್ಮ ‘ಆಡಿಯೋ ರಾಜಕಾರಣ’ ಮತ್ತು ‘ಒಡೆದು ಆಳುವ ನೀತಿ’ಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಸಫಲರಾಗುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್ ಕಿಡಿಕಾರಿದ್ದಾರೆ.
ಶಶಿಕಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲದಿದ್ದರೂ ಪಕ್ಷದ ಮೇಲೆ ಹೇಗೆ ಹಿಡಿತ ಸಾಧಿಸಲು ಸಾಧ್ಯ ಎಂದು ಮಾಜಿ ಸಚಿವರೂ ಆದ ಜಯಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅವರನ್ನು ಪಕ್ಷದಿಂದ ಹೊರ ಹಾಕಿದ ಮೇಲೆ, ತೆರೆಮರೆಯಲ್ಲಿ ಇದ್ದುಕೊಂಡು ಪಕ್ಷದ ಪ್ರಮುಖರೊಂದಿಗೆ ದೂರವಾಣಿಯಲ್ಲಿ ಶಶಿಕಲಾ ಸಂವಹನ ನಡೆಸುತ್ತಿದ್ದು, ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ‘ಇದು ಪಕ್ಷದಲ್ಲಿ ಗೊಂದಲ ಮೂಡಿಸುವ ಪ್ರಯತ್ನ’ ಎಂದು ಅವರು ಆರೋಪಿಸಿದ್ದಾರೆ.