ಲಖನೌ: ‘ಅಖಿಲೇಶ್ ಯಾದವ್ ಅವರ ರಾಜಕೀಯ ಅಪ್ರಬುದ್ಧತೆಯಿಂದಾಗಿಯೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ (ಎಸ್ಪಿ) ಸೋಲು ಎದುರಾಯಿತು’ ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಮಂಗಳವಾರ ಟೀಕಿಸಿದ್ದಾರೆ.
‘ಶಿವಪಾಲ್ ಅವರೇ ಎಸ್ಪಿ ಬಿಟ್ಟು ಬೇರೆಲ್ಲಾದರೂ ನಿಮಗೆ ಹೆಚ್ಚು ಗೌರವ ಸಿಗುತ್ತದೆ ಎಂದು ಅನಿಸಿದ್ದರೆ, ಅಲ್ಲಿಗೆ ಹೋಗಲು ಹಾಗೂ ಮೈತ್ರಿಕೂಟ ತೊರೆಯಲು ನೀವು ಸ್ವತಂತ್ರರಿದ್ದೀರಿ’ ಎಂದು ಸಮಾಜವಾದಿ ಪಕ್ಷವು ಶನಿವಾರ ಟ್ವೀಟ್ ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಪಾಲ್, ‘ಇದು ಅಖಿಲೇಶ್ ಅವರ ರಾಜಕೀಯ ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿ. ಹೀಗೆಲ್ಲಾ ಅವಮಾನಿಸುವ ಬದಲು ನನ್ನನ್ನು ಮೈತ್ರಿಕೂಟದಿಂದ ಉಚ್ಚಾಟಿಸಿದ್ದರೆ ಚೆನ್ನಾಗಿತ್ತು’ ಎಂದಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಯಶವಂತ ಸಿನ್ಹಾ ಅವರನ್ನು ಬೆಂಬಲಿಸಿತ್ತು. ಆದರೆ ಶಿವಪಾಲ್ ಅವರು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರ ಮತ ಚಲಾಯಿಸಿದ್ದರು. ಇದು ಎಸ್ಪಿ ನಾಯಕರ ಕೋಪಕ್ಕೆ ಕಾರಣವಾಗಿತ್ತು.