ಅಹಮದಾಬಾದ್: ಗಡಿಯಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳು ಭದ್ರತೆಗೆ ಸಹಕಾರವಾಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಭಾನುವಾರ ತಿಳಿಸಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಇಂಡೋ–ಪಾಕ್ ಗಡಿಗೆ ಹೊಂದಿಕೊಂಡಿರುವ ಬನಸ್ಕಾಂತ ಜಿಲ್ಲೆಯಲ್ಲಿ ‘ಸೀಮಾರ್ದಶನ‘ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಗಡಿಯಲ್ಲಿ ಪ್ರವಾಸೋದ್ಯಮ ಚಟುವಟಿಗೆಗಳು ನಡೆಯುವುದರಿಂದ ಉದ್ಯೋಗ ಸೃಷ್ಟಿಯಾಗುವ ಮೂಲಕ ಜನರು ದೇಶದಿಂದ ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವುದು ತಪ್ಪುತ್ತದೆ ಎಂದರು. ಹಾಗೇ ಜನರು ಮತ್ತು ಭದ್ರತಾ ಪಡೆ ಯೋಧರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ ಎಂದು ಹೇಳಿದರು.
ಸೀಮಾದರ್ಶನ ಪ್ರವಾಸೋದ್ಯಮ ಯೋಜನೆ ಆಕರ್ಷಣೀಯವಾಗಿದ್ದು ಸ್ಥಳೀಯರ ಆರ್ಥಿಕ ಪುನಶ್ಚೇತನಕ್ಕೆ ನೆರವಾಗಲಿದೆ. ಈ ಮೂಲಕ ಗಡಿ ಭಾಗದ ಜನರಿಗೆ ಭದ್ರತಾ ಪಡೆಗಳ ಯೋಧರ ಮೇಲೆ ಗೌರವ ಹೆಚ್ಚಾಗಲಿದೆ ಎಂದು ಅಮೀತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಡಿ ಪ್ರದೇಶಗಳ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.