ನವದೆಹಲಿ (ಪಿಟಿಐ): ಗಡಿ ವಿವಾದ ಕುರಿತ ಉದ್ವಿಗ್ನ ಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದೇ 14ರಂದು ಕರ್ನಾಟಕ –ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಗಡಿ ವಿವಾದ ಕುರಿತಂತೆ ಅಹವಾಲು ಹೇಳಿಕೊಳ್ಳಲು ಬಂದಿದ್ದ ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ನಿಯೋಗ ಶಾ ಅವರನ್ನು ಭೇಟಿಯಾದ ಬಳಿಕ, ಎನ್ಸಿಪಿ ನಾಯಕ ಅಮೋಲ್ ಕೊಲ್ಹೆ ಈ ವಿಷಯ ತಿಳಿಸಿದರು.
‘ಶಾ ಅವರು ನಮ್ಮ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದರು. ಸೌಹಾರ್ದ ಪರಿಹಾರಕ್ಕಾಗಿ 14ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂಬು ದಾಗಿ ತಿಳಿಸಿದರು’ ಎಂದು ಕೊಲ್ಹೆ ಹೇಳಿದರು.
ಗುರುವಾರ ಶಾ ಅವರಿಗೆ ಪತ್ರಬರೆದಿದ್ದ ಮಹಾವಿಕಾಸ ಆಘಾಡಿಮೈತ್ರಿಕೂಟದ ಸಂಸದರು, ‘ಕರ್ನಾಟಕ–ಮಹಾರಾಷ್ಟ್ರ ಗಡಿ ಸಮಸ್ಯೆ ತೀವ್ರರೂಪ ತಳೆದಿದೆ. ಯಾವುದೇ ವೇಳೆ ಹಿಂಸೆ ಭುಗಿಲೇಳಬಹುದು. ತಕ್ಷಣ ಮಧ್ಯಪ್ರವೇಶಿಸಬೇಕು’ ಎಂದು ಕೋರಿದ್ದರು.
‘ಕರ್ನಾಟಕದ ಕೆಲ ನಿಲುವುಗಳಿಂದ ಗಡಿ ಜಿಲ್ಲೆಗಳಲ್ಲಿ ಇರುವ ಮರಾಠಿ ಭಾಷಿಕ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ವಿಷಯ, ಪ್ರಸ್ತುತ ಸುಪ್ರೀಂ ಕೋರ್ಟ್ ಎದುರು ಇರುವಾಗಲೇ ಕರ್ನಾಟಕ ಇಂಥ ಕ್ರಮಕ್ಕೆ ಮುಂದಾಗಿದೆ’ ಎಂದು ಆರೋಪಿಸಿದ್ದರು.
ರಾಜ್ಯಗಳ ಪುನಾರಚನೆ ಬಳಿಕ ಬೆಳಗಾವಿ ಸೇರಿಕರ್ನಾಟಕದ 865 ಗ್ರಾಮಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರ ತಗಾದೆ ತೆಗೆದಿದೆ.ಆದರೆ, ‘ಗಡಿವಿವಾದ ಮುಗಿದ ಅಧ್ಯಾಯ’ ಎಂದು ಕರ್ನಾಟಕ ಹೇಳುತ್ತ ಬಂದಿದೆ.