ನವದೆಹಲಿ: ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದಿದ್ದ ಹಿಂಸಾಚಾರದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪೊಲೀಸರ ಆರೋಗ್ಯ ವಿಚಾರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡುವರು.
ರ್ಯಾಲಿ ವೇಳೆ ಸುಮಾರು 400 ಮಂದಿ ಪೊಲೀಸರಿಗೆ ಪೆಟ್ಟಾಗಿತ್ತು. ಅಮಿತ್ ಶಾ ಅವರು ಸಿವಿಲ್ ಲೈನ್ನಲ್ಲಿರುವ ಶುಶ್ರುತ್ ಟ್ರಾಮಾ ಸೆಂಟರ್ ಮತ್ತು ತೀರತ್ ರಾಮ್ ಹಾಸ್ಪಿಟಲ್ಗೆ ಭೇಟಿ ನೀಡಲಿದ್ದು, ಗಾಯಾಳು ಪೊಲೀಸರ ಆರೋಗ್ಯ ವಿಚಾರಿಸುವರು ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ದೆಹಲಿ ಪೊಲೀಸರು ಬುಧವಾರ ‘ಕೃಷಿ ಸಂಘಟನೆಗಳ ನಾಯಕರು ಪ್ರಚೋದನಾಕಾರಿ ಭಾಷಣ ಮಾಡಿದ್ದು, ಹಿಂಸಾಚಾದಲ್ಲಿ 394 ಸಿಬ್ಬಂದಿಗೆ ಗಾಯಗಳಾಗಿವೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ‘ ಎಂದು ಹೇಳಿದ್ದರು.
ಮಂಗಳವಾರ ನಡೆದಿದ್ದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಸಾವಿರಾರು ರೈತರು ಭಾಗಿಯಾಗಿದ್ದು ಕೆಂಪುಕೋಟೆಗೆ ಲಗ್ಗೆ ಹಾಕಿದ್ದರು. ಪೊಲೀಸರ ಜೊತೆಗೂ ಘರ್ಷಣೆಗೆ ಇಳಿದಿದ್ದರು. ಪೊಲೀಸರ ವಾಹನಗಳು ಜಖಂಗೊಂಡಿದ್ದವು. ರಾಜಪಥದಿಂದ ಕೆಂಪುಕೋಟೆಯವರೆಗೂ ಹಿಂಸಾಚಾರದ ಘಟನೆಗಳು ನಡೆದಿದ್ದವು.
ಪ್ರತಿಭಟನೆಯು ತೀವ್ರವಾಗಿದ್ದ ಐಟಿಒ ಬಳಿ ಟ್ರ್ಯಾಕ್ಟರ್ ಮಗುಚಿದ ಪರಿಣಾಮ ಪ್ರತಿಭಟನಕಾರನೊಬ್ಬ ಮೃತಪಟ್ಟಿದ್ದ. ಹಿಂಸಾಚಾರ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದರು.