ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಸರ್ಕಾರದಿಂದ ಬಡ ಹೆಣ್ಣು ಮಕ್ಕಳ ಮದುವೆಗೆ ₹1 ಲಕ್ಷ ಹಣ ಬಿಡುಗಡೆ

Last Updated 10 ಫೆಬ್ರುವರಿ 2023, 10:16 IST
ಅಕ್ಷರ ಗಾತ್ರ

ಅಮರಾವತಿ: 2022ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ವಿವಾಹವಾದ 4,536 ಅರ್ಹ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ವೈಎಸ್‌ಆರ್ ಕಲ್ಯಾಣಮಸ್ತು ಮತ್ತು ವೈಎಸ್‌ಆರ್ ಶಾದಿ ತೋಫ ಯೋಜನೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶುಕ್ರವಾರ ₹38.18 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.

ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು ಮತ್ತು ಕಟ್ಟಡ ಕಾರ್ಮಿಕ ವರ್ಗದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಈ ಮೊತ್ತ ನೇರವಾಗಿ ಜಮಾ ಆಗಲಿದೆ.

ಸಾಂಕೇತಿಕವಾಗಿ ಹಣ ವರ್ಗಾಯಿಸಿ ಮಾತನಾಡಿದ ರೆಡ್ಡಿ, ಮಕ್ಕಳ ಶಿಕ್ಷಣ ಉತ್ತೇಜನ, ಬಾಲ್ಯ ವಿವಾಹ ತಡೆಗಟ್ಟುವುದು ಮತ್ತು ಶಾಲೆಗಳಲ್ಲಿ ದಾಖಲಾತಿ ಅನುಪಾತವನ್ನು ಹೆಚ್ಚಿಸುವ ಮತ್ತು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಶಿಕ್ಷಣವೇ ನಮ್ಮ ಮಕ್ಕಳಿಗೆ ನೀಡುವ ದೊಡ್ಡ ಆಸ್ತಿ ಎಂದು ಸರ್ಕಾರ ಬಲವಾಗಿ ನಂಬಿದೆ. ದುರ್ಬಲ ವರ್ಗದ ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯ ಲಾಭ ಪಡೆಯಲು ವಧು-ವರರು 10ನೇ ತರಗತಿ ತೇರ್ಗಡೆಯಾಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

17,709 ಫಲಾನುಭವಿಗಳಿಗೆ ₹68.68 ಕೋಟಿ ಪಾವತಿಸಲು ವಿಫಲವಾದ ತೆಲುಗುದೇಶಂ ಪಕ್ಷದ ಸರ್ಕಾರ 2018 ರಲ್ಲಿ ಯೋಜನೆ ಹಿಂಪಡೆದಿತ್ತು. ಆದರೆ ತಮ್ಮ ಸರ್ಕಾರ ಈ ಯೋಜನೆಗೆ ಮರು ಚಾಲನೆ ನೀಡಿ ಯೋಜನೆಯನ್ನು ಸಂಪೂರ್ಣ ಪಾರದರ್ಶಕವಾಗಿಸಿದೆ ಎಂದು ರೆಡ್ಡಿ ಹೇಳಿದರು.

ಟಿಡಿಪಿ ಆಡಳಿತದಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ತಲಾ ₹ 40 ಸಾವಿರದಿಂದ ಗರಿಷ್ಠ 50 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ವೈಎಸ್‌ಆರ್‌ಸಿಪಿ ಸರ್ಕಾರ ಅದನ್ನು ₹ 1 ಲಕ್ಷದವರೆಗೆ ಏರಿಸಿದೆ. ಅಂಗವಿಕಲರಿಗೆ ₹1.5 ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ.

ಅದೇ ರೀತಿ ಅಂತರ್ಜಾತಿ ವಿವಾಹವಾದ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ₹1.2 ಲಕ್ಷದವರೆಗೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT