ಪ್ರಯಾಗರಾಜ್/ಲಖನೌ: ಬಿಎಸ್ಪಿಯ ಮಾಜಿ ಶಾಸಕ ರಾಜು ಪಾಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಎಂಬುವವರ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ವಿಜಯ್ ಚೌಧರಿ ಅಲಿಯಾಸ್ ಉಸ್ಮಾನ್ ಎಂಬಾತ ಪ್ರಯಾಗ್ರಾಜ್ನ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕೌಂಧಿಯಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್ಕೌಂಟರ್ ನಡೆದಿದ್ದು, ಉಸ್ಮಾನ್ನ ಕುತ್ತಿಗೆ, ಎದೆ ಮತ್ತು ತೊಡೆಗೆ ಗುಂಡೇಟು ತಗುಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನಕಲಿ ಎನ್ಕೌಂಟರ್ ನಡೆಸಿ ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಉಸ್ಮಾನ್ನ ಹೆಂಡತಿ ಸುಹಾನಿ ಆರೋಪಿಸಿದ್ದಾರೆ.
ಎನ್ಕೌಂಟರ್ ವೇಳೆ ಪೊಲೀಸ್ ಕಾನ್ಸ್ಟೆಬಲ್ ನರೇಂದ್ರ ಪಾಲ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾತಕಿ ಅತೀಕ್ ಅಹ್ಮದ್ನ ಸಹಚರನಾಗಿರುವ ಉಸ್ಮಾನ್, ಉಮೇಶ್ ಪಾಲ್ ಅವರಿಗೆ ಮೊದಲು ಗುಂಡು ಹಾರಿಸಿದ್ದ ಎಂದೂ ವಿವರಿಸಿದ್ದಾರೆ.
ಉಮೇಶ್ ಪಾಲ್ ಅವರ ಹಂತಕರು ಸಂಚರಿಸಿದ್ದ ವಾಹನದ ಚಾಲಕ ಅರ್ಬಾಜ್ ಎಂಬಾತ ಈಚೆಗೆ ಎನ್ಕೌಂಟರ್ನಲ್ಲಿ ಹತನಾಗಿದ್ದ.