ನವದೆಹಲಿ (ಪಿಟಿಐ): ಕೇಂದ್ರ ಕಾನೂನು ಕಾರ್ಯದರ್ಶಿಯಾಗಿ ಸುಮಾರು ಎರಡೂವರೆ ವರ್ಷಗಳ ಅಧಿಕಾರ ಅವಧಿಯ ನಂತರ, ಅನೂಪ್ ಕುಮಾರ್ ಮೆಂದಿರತ್ತಾ ಅವರು ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕವಾಗುವ ಮೂಲಕ ಮತ್ತೆ ನ್ಯಾಯಾಂಗ ಕ್ಷೇತ್ರಕ್ಕೆ ಮರಳಿದ್ದಾರೆ.
ನ್ಯಾಯಮೂರ್ತಿಯಾಗಿಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಅವರು ನ್ಯಾಯಾಂಗ ಮತ್ತು ಕಾರ್ಯಾಂಗದ ಎರಡೂ ಕ್ಷೇತ್ರಗಳಲ್ಲಿ ಅನುಭವ ಹೊಂದಿದವರಾಗಿದ್ದಾರೆ.
ಕೇಂದ್ರ ಕಾನೂನು ಕಾರ್ಯದರ್ಶಿಯಾಗಿ ನೇಮಕಗೊಂಡ ಮೊದಲ ಜಿಲ್ಲಾ ನ್ಯಾಯಾಧೀಶರಾಗಿರುವ ಮೆಂದಿರತ್ತಾ ಅವರು, ನ್ಯಾಯಾಂಗ ಕ್ಷೇತ್ರಕ್ಕೆ ಮರಳುತ್ತಿರುವುದು ಮತ್ತೊಂದು ದಾಖಲೆ ಆಗಿದೆ. ಮೆಂದಿರತ್ತಾ ಅವರು ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ಕೇಂದ್ರ ಕಾನೂನು ಕಾರ್ಯದರ್ಶಿಯಾಗಿದ್ದಾರೆ.
ಮೆಂದಿರತ್ತಾ ಅವರು 1987ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ದೆಹಲಿಯಲ್ಲಿಯೇ ಹುಟ್ಟಿ ಬೆಳೆದಿರುವ ಅವರು, ಕಾನೂನು ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಅನೇಕ ಹಿರಿಯ ವಕೀಲರೊಂದಿಗೆ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ.