ನವದೆಹಲಿ: ದೆಹಲಿಯ ಹಲವೆಡೆ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಜೆಪಿಯ ‘ಬುಲ್ಡೋಜರ್ ರಾಜಕೀಯ’ ಎಂದಿರುವ ಆಮ್ ಆದ್ಮಿ ಪಕ್ಷ(ಎಎಪಿ) ಆ ಕುರಿತು ಸೋಮವಾರ ಸಭೆ ನಡೆಸಿದೆ.
ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ತಮ್ಮ ನಿವಾಸದಲ್ಲಿ ಶಾಸಕರ ಜತೆ ಸಭೆ ನಡೆಸಿದ್ದು, ಪಕ್ಷದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.
ಬಿಜೆಪಿ ಆಡಳಿತವಿರುವ ಮೂರು ನಗರ ಪಾಲಿಕೆಗಳು ಶಾಹೀನ್ ಭಾಗ್, ಮದನ್ಪುರ ಖಾದರ್, ನ್ಯೂ ಫ್ರೆಂಡ್ಸ್ ಕಾಲೊನಿ, ಮಂಗಲ್ಪುರಿ, ಕರೋಲ್ ಭಾಗ್, ಖ್ಯಾಲ ಹಾಗೂ ಲೋಧಿ ಕಾಲೊನಿ ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಇದಕ್ಕೆ ಎಎಪಿ ಸರ್ಕಾರ ಆಕ್ಷೇಪ ಸೂಚಿಸಿದೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು.
ಬಳಿಕ ಮಾತನಾಡಿದ್ದ ಅವರು ದೆಹಲಿಯ ಅನಧಿಕೃತ ಕಾಲೊನಿಗಳು, ಕೊಳೆಗೇರಿಗಳಲ್ಲಿರುವ 63 ಲಕ್ಷ ಮನೆಗಳನ್ನು ಕೆಡವಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದೆ. ಅವರ (ಬಿಜೆಪಿ) ‘ಬುಲ್ಡೋಜರ್’ ನೀತಿಯನ್ನು ಎಎಪಿ ಸರ್ಕಾರ ವಿರೋಧಿಸುತ್ತದೆ ಎಂದು ಹೇಳಿದ್ದರು.