ಜೈಪುರ: ಕೋಮು ಗಲಭೆ ನಡೆದ ರಾಜಸ್ಥಾನದ ಕರೌಲಿಗೆ ಬುಧವಾರ ಭೇಟಿ ನೀಡಲು ಮುಂದಾದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಹೆದ್ದಾರಿಯಲ್ಲೇ ತಡೆಯಲಾಯಿತು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರನ್ನು ತೇಜಸ್ವಿ ಸೂರ್ಯ ಔರಂಗಜೇಬ್ಗೆ ಹೋಲಿಸಿದ್ದಾರೆ.
ಹಿಂದೂ ಹೊಸ ವರ್ಷಾಚರಣೆಯ ಪ್ರಯುಕ್ತ ಏಪ್ರಿಲ್ 2ರಂದು ಹಿಂದೂಗಳು ಬೈಕ್ ರ್ಯಾಲಿ ನಡೆಸಿದ್ದರು. ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಬೈಕ್ ರ್ಯಾಲಿ ಸಾಗುವಾಗ ಕಲ್ಲು ತೂರಾಟ ನಡೆದಿತ್ತು. ಕಿಡಿಗೇಡಿಗಳು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು ಹಾಗೂ ಕೋಮುಗಳ ನಡುವೆ ಘರ್ಷಣೆ ಉಂಟಾಗಿ ಹಿಂಸಾಚಾರ ನಡೆದಿತ್ತು.
ಅಶೋಕ್ ಗೆಹಲೋತ್ ಔರಂಗಜೇಬ್ ರೀತಿ ವರ್ತಿಸುತ್ತಿರುವುದಾಗಿ ಟೀಕಿಸಿರುವ ತೇಜಸ್ವಿ ಸೂರ್ಯ, 'ಇಂದು ಔರಂಗಜೇಬನ ಕೆಲಸಗಳನ್ನು ಅಶೋಕ್ ಗೆಹಲೋತ್ ರೀತಿಯ ಜನರು ಮಾಡುತ್ತಿದ್ದಾರೆ. ಇದು ಅಫ್ಘಾನಿಸ್ತಾನ ಅಲ್ಲ ಎಂದು ಅವರಿಗೆ ತಿಳಿಸಲು ಬಯಸುತ್ತೆನೆ. ಹಿಂದೂಗಳನ್ನು ಎರಡೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷವು ಈ ದಿನದ ಮುಸ್ಲೀಂ ಲೀಗ್ ಆಗಿದೆ. ಆಗ ಮುಸ್ಲೀಂ ಲೀಗ್ ಮಾಡುತ್ತಿದ್ದ ಕೆಲಸಗಳನ್ನು ಇಂದು ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹಲೋತ್ ರೀತಿಯ ಜನರು ನಡೆಸುತ್ತಿದ್ದಾರೆ' ಎಂದಿದ್ದಾರೆ.
ಗಲಭೆಯ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಜೆಪಿ 'ನ್ಯಾಯ ಯಾತ್ರೆ' ಕೈಗೊಂಡಿದೆ. 'ಗೆಹಲೋತ್ ಅವರ ಸರ್ಕಾರವು ನಮ್ಮನ್ನು ಅಕ್ರಮವಾಗಿ ಬಂಧಿಸಲು ಪ್ರಯತ್ನಿಸಿದೆ. ಪ್ರತಿಭಟಿಸುವುದು ನಮ್ಮ ಸಂವಿಧಾನಾತ್ಮಾಕ ಹಕ್ಕು...' ಎಂದು ತೇಜಸ್ವಿ ಸೂರ್ಯ ಆರೋಪಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
'ನನ್ನ ಕಾಲೇಜು ದಿನಗಳಲ್ಲಿ ಬಿಹಾರದಲ್ಲಿನ ಜಂಗಲ್ ರಾಜ್ಯದ ಕುರಿತು ಕೇಳುತ್ತಿದ್ದೆ. ಇಂದು ಅದೇ ಜಂಗಲ್ ರಾಜ್ಯವನ್ನು ರಾಜಸ್ಥಾನದಲ್ಲಿ ಕಾಣುತ್ತಿದ್ದೇವೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಹಾಗೂ ಗೂಂಡಾಗಳು ಭಯ ಮುಕ್ತರಾಗಿದ್ದಾರೆ. ಅವರಿಗೆ ಕಾನೂನಿನ ಭಯವೇ ಇಲ್ಲವಾಗಿದೆ...' ಎಂದು ಟೀಕಿಸಿದ್ದಾರೆ.
ಕರೌಲಿಗೆ 40 ಕಿ.ಮೀ. ದೂರದಲ್ಲಿ ಇರುವಾಗಲೇ ತೇಜಸ್ವಿ ಸೂರ್ಯ ಮತ್ತು ಅವರ ನಿಯೋಗವನ್ನು ತಡೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.