ಕೊಕ್ರಜಾರ್ (ಅಸ್ಸಾಂ): ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಜನರುಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ 'ಕೆಂಪು ಕಾರ್ಡ್' ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆ. ಇದರಂತೆ ಫುಟ್ಬಾಲ್ನಲ್ಲಿ ತಪ್ಪೆಸಗಿದ ಆಟಗಾರನ ವಿರುದ್ಧ ರೆಫರಿ ರೆಡ್ ಕಾರ್ಡ್ ತೋರಿಸುವ ರೀತಿಯಲ್ಲಿ ಅಸ್ಸಾಂ ಜನತೆಯು ಕಾಂಗ್ರೆಸ್ ಮಹಾಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂನ ಜನರು ಎನ್ಡಿಎಗೆ ಆಶೀರ್ವಾದವನ್ನು ನೀಡಿದ್ದಾರೆ. ಅಸ್ಸಾಂ ಜನತೆಯು ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೆಂಪು ಕಾರ್ಡ್ ತೋರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಅದೇ ಹೊತ್ತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಬೋಡೊ ಪ್ರಾಬಲ್ಯದ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಮೂಕಪ್ರೇಕ್ಷಕವಾಗಿತ್ತು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ತನ್ನ ಆಡಳಿತ ಕಾಲದಲ್ಲಿ ಬೋಡೊಲ್ಯಾಂಡ್ ಮೇಲೆ ಬಾಂಬ್, ಗನ್ ದಾಳಿ ನಡೆಸಿದ್ದು, ಸಂಸ್ಕೃತಿಗೆ ದಿಗ್ಭಂಧನ ಹೇರಿದೆ. ಆದರೆ ಬೋಡೊಲ್ಯಾಂಡ್ಗೆ ಎನ್ಡಿಎ ಶಾಂತಿ ಹಾಗೂ ಗೌರವವನ್ನು ಉಡುಗೊರೆಯಾಗಿ ನೀಡಿದೆ ಎಂದು ಹೇಳಿದ್ದಾರೆ.
ಲೋಕಸಭಾ ಸಂಸದ ಬದ್ರೂದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿಯನ್ನು ಟೀಕಿಸಿರುವ ಪ್ರಧಾನಿ ಮೋದಿ, ಈ ಬಾರಿ ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟಕ್ಕೆ ಶಿಕ್ಷೆಯಾಗಲಿದೆ. ಅಸ್ಸಾಂನಲ್ಲಿ ಶಾಂತಿಯನ್ನು ಕಬಳಿಸಲು ಅನುಮತಿಸುವುದಿಲ್ಲ ಎಂದಿದ್ದಾರೆ.
ಬೋಡೊಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ ಶಾಂತಿ, ಪ್ರಗತಿ ಮತ್ತು ರಕ್ಷಣೆಯು ನಮ್ಮ ಪ್ರಧಾನ ಮಂತ್ರವಾಗಿದೆ ಎಂದು ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.