ತಿರುವಳ್ಳ, ಕೇರಳ: ಜಮ್ಮು–ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಎಲ್ಡಿಎಫ್ ಶಾಸಕ ಕೆ.ಟಿ.ಜಲೀಲ್ ವಿರುದ್ದ ತನಿಖೆ ನಡೆಸುವಂತೆ ತಿರುವಳ್ಳದ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
‘ಶಾಸಕ ಜಲೀಲ್ ವಿರುದ್ದ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಕೀಳ್ವಿಪುರ ಪೊಲೀಸ್ ಠಾಣಾಧಿಕಾರಿಗೆ ಕೋರ್ಟ್ ನಿರ್ದೇಶನ ನೀಡಿದೆ’ ಎಂದು ಅರ್ಜಿದಾರರ ಪರ ವಕೀಲ ವಿ.ಜಿನಚಂದ್ರನ್ ತಿಳಿಸಿದ್ದಾರೆ.
‘ಜಲೀಲ್ ಅವರು ದೇಶವಿರೋಧಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆರ್ಎಸ್ಎಸ್ ಮುಖಂಡ ಅರುಣ್ ಮೋಹನ್ ಅರ್ಜಿ ಸಲ್ಲಿಸಿದ್ದಾರೆ.
ಆಗಸ್ಟ್ 12ರಂದು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದ್ದ ಜಲೀಲ್, ‘ಕಾಶ್ಮೀರದ ಕೆಲ ಪ್ರದೇಶವನ್ನು ಪಾಕಿಸ್ತಾನ ಆಕ್ರಮಿಸಿದ್ದು, ಈ ಪ್ರದೇಶವನ್ನು ಆಜಾದ್ ಕಾಶ್ಮೀರ ಎನ್ನಲಾಗುತ್ತದೆ. ಈ ಪ್ರದೇಶದ ಮೇಲೆ ಪಾಕಿಸ್ತಾನ ನೇರವಾದ ನಿಯಂತ್ರಣ ಹೊಂದಿಲ್ಲ’ ಎಂದು ಹೇಳಿದ್ದರು.
ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಈ ವಿಷಯ ಕುರಿತು ಫೇಸ್ಬುಕ್ನಲ್ಲಿ ಮಾಡಿದ್ದ ಪೋಸ್ಟ್ಅನ್ನು ಅವರು ಹಿಂಪಡೆದಿದ್ದರು.