ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂದೋಲನವಾಗಿ ಅಮೃತ ಮಹೋತ್ಸವ: ಪ್ರಧಾನಿ ನರೇಂದ್ರ ಮೋದಿ

Last Updated 31 ಜುಲೈ 2022, 11:42 IST
ಅಕ್ಷರ ಗಾತ್ರ

ನವದೆಹಲಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಒಂದು ಸಾಮೂಹಿಕ ಜನಾಂದೋಲನ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಜನರು ಆಗಸ್ಟ್‌ 2–15ರ ಅವಧಿಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಪ್ರೊಫೈಲ್‌ ಚಿತ್ರವಾಗಿ ರಾಷ್ಟ್ರಧ್ವಜ ಬಳಸಬೇಕು ಎಂದು ಕರೆ ನೀಡಿದ್ದಾರೆ.

ಮಾಸಿಕ ‘ಮನ್‌ ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯೋತ್ಸವನ್ನು ಅಮೃತ ಮಹೋತ್ಸವವಾಗಿ ಆಚರಿಸಲಾಗುತ್ತಿದೆ. ‘ಹರ್ ಘರ್ ತಿರಂಗಾ’ ಹೆಸರಿನ ವಿಶೇಷ ಅಭಿಯಾನವನ್ನು ಆಗಸ್ಟ್ 13 ರಿಂದ 15ರವರೆಗೂ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಮನೆಗಳಲ್ಲಿಯೂ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಈ ಅಭಿಯಾನವನ್ನು ಮುನ್ನಡೆಸೋಣ ಎಂದು ಜನತೆಗೆ ಕರೆ ನೀಡಿದರು. ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರ ಜನ್ಮದಿನೋತ್ಸವವೂ ಆಗಸ್ಟ್ 2ರಂದು ನಡೆಯಲಿದೆ ಎಂದೂ ಪ್ರಧಾನಿ ಹೇಳಿದರು.

ದೇಶದ 75ನೇ ಸ್ವಾತಂತ್ರ್ಯೋತ್ಸವದ ಘಳಿಗೆಗೆ ಸಾಕ್ಷಿಯಾಗುವ ಅದೃಷ್ಟ ಈಗಿನ ಪೀಳಿಗೆಗೆ ಲಭ್ಯವಾಗಿದೆ. ದೇಶದ ಜನರು ತಮ್ಮ ಕರ್ತವ್ಯವನ್ನು ಪೂರ್ಣ ಬದ್ಧತೆಯೊಂದಿಗೆ ಪಾಲಿಸಬೇಕು ಎಂಬುದೇ ಅಮೃತ ಸ್ವಾತಂತ್ರ್ಯೋತ್ಸವದ ದೊಡ್ಡ ಸಂದೇಶವಾಗಿದೆ ಎಂದು ಹೇಳಿದರು.

ಚಾರಿತ್ರಿಕ ಹಿನ್ನೆಲೆ ಹೊಂದಿರುವ 75 ರೈಲ್ವೆ ನಿಲ್ದಾಣಗಳು 24 ರಾಜ್ಯಗಳಲ್ಲಿವೆ. ಜನತೆ ಈ ಅವಧಿಯಲ್ಲಿ ಅಲ್ಲಿಗೆ ಭೇಟಿ ನೀಡಬೇಕು ಎಂದು ಸಲಹೆ ಮಾಡಿದರು.

ರೈಲ್ವೆ ಇಲಾಖೆಯು ಜುಲೈ 18 ರಿಂದ 23ರವರೆಗೆ ‘ಆಜಾದಿಕ ರೈಲ್‌ ಗಾಡಿ’ ಸಪ್ತಾಹವಾಗಿ ಆಚರಿಸಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸಕ್ಕೆ ಸಾಕ್ಷಿಯಾಗಿರುವ 75 ನಿಲ್ದಾಣಗಳನ್ನು 7 ವಿವಿಧ ರೈಲುಗಳ ಮೂಲಕ ಬೆಸೆಯುವ ಕಾರ್ಯವೂ ನಡೆದಿದೆ ಎಂದು ತಿಳಿಸಿದೆ.

ಆಟಿಕೆ ಉದ್ಯಮಕ್ಕೆ ಶ್ಲಾಘನೆ: ಭಾರತದ ಆಟಿಕೆ ಉದ್ಯಮವು ಗಮನಾರ್ಹ ಸಾಧನೆ ಮಾಡಿದೆ. ಇದರ ರಫ್ತು ವಹಿವಾಟು ₹ 300–400 ಕೋಟಿಯಿಂದ ಈಗ ಒಟ್ಟು ₹ 2,600 ಕೋಟಿಗೆ ಏರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಹಿಂದೊಮ್ಮೆ ₹ 3000 ಕೋಟಿ ಮೌಲ್ಯದ ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ, ಅದು ಶೇ 70ರಷ್ಟು ಕಡಿಮೆಯಾಗಿದೆ. ಈಗ ಸ್ಥಿತಿ ಬದಲಾಗಿದೆ. ₹ 2,600 ಕೋಟಿ ಮೌಲ್ಯದ ಆಟಿಕೆ ರಫ್ತು ಮಾಡಲಾಗಿದೆ. ಕೊರೊನಾ ಅವಧಿಯಲ್ಲಿಯೂ ಈ ಸಾಧನೆಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT