ರಾಮ್ಪುರ (ಪಿಟಿಐ): ರಾಮ್ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಅಜಂ ಖಾನ್ ನಿಕಟವರ್ತಿ ಅಸಿಮ್ ರಾಜಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ದೆಹಲಿ ಆಸ್ಪತ್ರೆಯಲ್ಲಿ ಅಜಂ ಖಾನ್ ಅವರನ್ನು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭೇಟಿ ಮಾಡಿ ಚರ್ಚಿಸಿದ ಮರುದಿನ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಅಜಂ ಖಾನ್ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಸ್ಥಾನ ತೆರವು ಮಾಡಿದ್ದರು.
‘ಚುನಾವಣೆಯಲ್ಲಿ ನನ್ನ ಪತ್ನಿ ಸ್ಪರ್ಧಿಸುತ್ತಾರೆ ಎಂದು ಜನರು ಅಂದುಕೊಂಡಿದ್ದರು. ಆದರೆ, ರಾಜಕೀಯ ಅನುಭವ ಹೊಂದಿರುವ ಹಳೆಯ ಒಡನಾಡಿ ಅಸಿಂ ರಾಜಾನನ್ನು ಕಣಕ್ಕಿಳಿಸುತ್ತಿದ್ದೇನೆ. ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಯಕರು ಶ್ರಮಿಸಬೇಕು’ ಎಂದು ಅಜಂ ಖಾನ್ ಕರೆ ನೀಡಿದರು.
ಎರಡು ವರ್ಷ ಜೈಲಿನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಂಡ ಖಾನ್, ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದಕ್ಕೆ ಧನ್ಯವಾದ ತಿಳಿಸಿದರು.