ಲಖನೌ: ವಾರಾಣಸಿಯ ಜ್ಞಾನವಾಪಿ, ಮಥುರಾದಲ್ಲಿನ ಶಾಹಿ ಈದ್ಗಾ ಮಸೀದಿಗಳನ್ನು ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆದಲ್ಲಿ, ಅಂತಹ ಯತ್ನದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ ಎಂದು ರಾಮಜನ್ಮಭೂಮಿ –ಬಾಬರಿ ಮಸೀದಿ ಪ್ರಕರಣದ ಅರ್ಜಿದಾರರು ಎಚ್ಚರಿಸಿದ್ದಾರೆ.
ವಾರಾಣಸಿಯಲ್ಲಿ ಹೆಸರಾಂತ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಜ್ಞಾನವಾಪಿ ಮಸೀದಿ ಇದ್ದರೆ, ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಸ್ಥಳಕ್ಕೆ ಹೊಂದಿಕೊಂಡಂತೆ ಶಾಹಿ ಈದ್ಗಾ ಮಸೀದಿ ಇದೆ.
‘ವಾರಾಣಸಿ, ಮಥುರಾ ಪ್ರಕರಣದಲ್ಲಿ ನಾವು ಒತ್ತಡಕ್ಕೆ ಮಣಿಯುವುದಿಲ್ಲ. ಹಿಂದೂ ಸಂಘಟನೆಗಳು ಒತ್ತಾಯದಿಂದ ಮಸೀದಿಗಳನ್ನು ವಶಕ್ಕೆ ಪಡೆಯಲು ಮುಂದಾದಲ್ಲಿ ಅದರ ವಿರುದ್ಧ ದೇಶವ್ಯಾಪಿ ಪ್ರತಿಭಟಿಸಲಿದ್ದೇವೆ’ ಎಂದು ಹಾಜಿ ಮೆಹಬೂಬ್ ಅವರು ಅಯೋಧ್ಯೆಯಲ್ಲಿ ಹೇಳಿದರು. ಮೆಹಬೂಬ್ ಅವರು ರಾಮಜನ್ಮಭೂಮಿ –ಬಾಬರಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾಗಿದ್ದಾರೆ.
ಜ್ಞಾನವಾಪಿಯಲ್ಲಿ ಸಿಕ್ಕಿದೆ ಎಂದು ಬಿಂಬಿಸಲಾಗುತ್ತಿರುವ ‘ಶಿವಲಿಂಗ’ವು ವಾಸ್ತವವಾಗಿ ಕಾರಂಜಿಯಾಗಿದೆ ಎಂದು ಪ್ರತಿಪಾದಿಸಿದರು. ಶಿವಲಿಂಗ ಸಿಕ್ಕಿದೆ ಎಂದು ಹಿಂದೂಪರ ವಕೀಲರು ಪ್ರತಿಪಾದಿಸಿದ ನಂತರ ಸ್ಥಳೀಯ ನ್ಯಾಯಾಲಯವು ಆ ಸ್ಥಳವನ್ನು ಜಪ್ತಿ ಮಾಡಲು ಆದೇಶಿಸಿತ್ತು.
ಇನ್ನೊಂದೆಡೆ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣಕ್ಕೆ ಹೊಂದಿಕೊಂಡಂತೆ ಇರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಈಚೆಗೆ ಮಥುರಾದ ಸ್ಥಳೀಯ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.