ನವದೆಹಲಿ: ಮಾದಕ ವಸ್ತು ವ್ಯಸನಿ ಯುವಕನೊಬ್ಬ ಪುನರ್ವಸತಿ ಕೇಂದ್ರದಿಂದ ವಾಪಸ್ ಬಂದ ಮರು ದಿನವೇ, ಚಾಕು ಇರಿದು ತಂದೆ–ತಾಯಿ, ಸಹೋದರಿ ಮತ್ತು ಅಜ್ಜಿಯನ್ನು ಹತ್ಯೆ ಮಾಡಿರುವ ಭೀಕರ ಘಟನೆ ವಾಯುವ್ಯ ದೆಹಲಿಯ ಪಾಲಮ್ನಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕೇಶವ್ (25) ಇಡೀ ಕುಟುಂಬವನ್ನೇ ಹತ್ಯೆ ಮಾಡಿದ ವ್ಯಕ್ತಿ. ಮೃತರನ್ನು ಅಜ್ಜಿ ದೀವಾನ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ತಂಗಿ ಊರ್ವಶಿ (18) ಎಂದು ಗುರುತಿಸಲಾಗಿದೆ.
ಕುಟುಂಬಸ್ಥರು ಮತ್ತು ಆರೋಪಿ ನಡುವೆ ನಡೆದ ವಾಗ್ವಾದದ ನಂತರ ಮಂಗಳವಾರ ರಾತ್ರಿ ಕೊಲೆ ನಡೆದಿದೆ. ಮೃತದೇಹಗಳು ಪ್ರತ್ಯೇಕ ಕೊಠಡಿಯಲ್ಲಿ ರಕ್ತಸಿಕ್ತವಾಗಿ ಪತ್ತೆಯಾಗಿವೆ.ಪ್ರಾಥಮಿಕ ತನಿಖೆ ಪ್ರಕಾರ ಕೇಶವ್, ಗುರುಗ್ರಾಮದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಕಳೆದ ತಿಂಗಳು ಉದ್ಯೋಗ ತೊರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ನೆರೆಹೊರೆಯವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಈತನ ವಿರುದ್ಧ ಐಪಿಸಿ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.